ADVERTISEMENT

ಸೂಲಿಬೆಲೆ: ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ; ನಿಧಿಗಾಗಿ ಹಸುಳೆ ಬಲಿ ಕೊಡಲು ಯತ್ನ!

ಮನೆಯಲ್ಲೇ ಗುಂಡಿ ತೋಡಿ ವಾಮಾಚಾರ । ,ಹಸುಳೆಗೆ ಬಾಲಮಂದಿರದಲ್ಲಿ ಆಶ್ರಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 23:44 IST
Last Updated 4 ಜನವರಿ 2026, 23:44 IST
ವಾಮಾಚಾರಕ್ಕಾಗಿ ಸೂಲಿಬೆಲೆಯ ಜನತಾ ಕಾಲೋನಿಯ ಮನೆಯಲ್ಲಿ ತೋಡಿರುವ ಗುಂಡಿ 
ವಾಮಾಚಾರಕ್ಕಾಗಿ ಸೂಲಿಬೆಲೆಯ ಜನತಾ ಕಾಲೋನಿಯ ಮನೆಯಲ್ಲಿ ತೋಡಿರುವ ಗುಂಡಿ    

ಸೂಲಿಬೆಲೆ (ಹೊಸಕೋಟೆ): 8 ತಿಂಗಳ ದತ್ತು ಮಗುವನ್ನು ನಿಧಿಗಾಗಿ ಬಲಿ ಕೊಡಲು ಸಿದ್ಧತೆ ನಡೆಸಿದ್ದ ಮನೆಯ ಮೇಲೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಸುಳೆಯನ್ನು ರಕ್ಷಿಸಿದ್ದಾರೆ. 

ಸೂಲಿಬೆಲೆಯ ಜನತಾ ಕಾಲೊನಿ ಮನೆಯಲ್ಲಿ ವಾಮಾಚಾರ ನಡೆಯುತ್ತಿದೆ. ಮಗು ಬಲಿಗೆ ಸಿದ್ಧತೆ ನಡೆದಿದೆ ಎಂದು ಶನಿವಾರ ಮಕ್ಕಳ ಸಹಾಯವಾಣಿ ‘1098’ಕ್ಕೆ ಕರೆ ಮಾಡಿ ವ್ಯಕ್ತಿಯೊಬ್ಬರು ಸುಳಿವು ನೀಡಿದ್ದರು.

ಸೈಯ್ಯದ್‌ ಇಮ್ರಾನ್ ಮತ್ತು ನಜ್ಮಾ ದಂಪತಿ ಬನದ ಹುಣ್ಣಿಮೆ ದಿನದಂದು ಬಲಿ ಕೊಡಲು ಪೂಜೆ, ವಾಮಾಚಾರ ನಡೆಸಿದ್ದಾರೆ. ತಕ್ಷಣ ಜನತಾ ಕಾಲೊನಿಗೆ ಬನ್ನಿ ಎಂದು ಕರೆ ಮಾಡಿದ್ದ ವ್ಯಕ್ತಿ ಖಚಿತವಾಗಿ ಹೇಳಿದ್ದರು.

ADVERTISEMENT

ಕಾರ್ಯಪ್ರವತ್ತರಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಪೊಲೀಸರ ನೆರವು ಪಡೆದು ಮನೆಯ ಮೇಲೆ ದಾಳಿ ನಡೆಸಿದರು. ಹಸುಳೆಯನ್ನು ರಕ್ಷಿಸಿ ದೇವನಹಳ್ಳಿಯ ಬಾಲಮಂದಿರ ವಶಕ್ಕೆ ಒಪ್ಪಿಸಿದರು. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸೋಮವಾರ ಈ ಮಗುವನ್ನು ಹಾಜರುಪಡಿಸಲಾಗುತ್ತಿದೆ.  

ಮೂರಂತಸ್ತಿನ ಕಟ್ಟಡದ ನೆಲಮಹಡಿಯ ಕೋಣೆಯಲ್ಲಿದ್ದ ಹುತ್ತ ಅಗೆದು ಗುಂಡಿ ತೋಡಲಾಗಿತ್ತು. ಗುಂಡಿ ಸುತ್ತ ಪೂಜೆಗೆ ಅಣಿಗೊಳಿಸಿರುವುದು ದಾಳಿ ವೇಳೆ ಪತ್ತೆಯಾಗಿದೆ. 

ನಜ್ಮಾ ದಂಪತಿಗೆ ಇಬ್ಬರು ಮಕ್ಕಳಿದ್ದರೂ ಕೋಲಾರದ ಬಡ ದಂಪತಿಯ ಗಂಡು ಮಗುವನ್ನು ₹1ಲಕ್ಷ ನೀಡಿ ದತ್ತು ಪಡೆದಿದ್ದರು. ದತ್ತು ಪಡೆಯುವಾಗ ಕಾನೂನುಕ್ರಮ ಅನುಸರಿಸಿಲ್ಲ. ದಂಪತಿ ನೀಡುತ್ತಿರುವ ವಿಭಿನ್ನ ಹೇಳಿಕೆಗಳು ಅನುಮಾನ ಮೂಡಿಸುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. 

ಮನೆಯಲ್ಲಿ ಅನೇಕ ದಿನಗಳಿಂದ ಬೆಳೆದಿದ್ದ ಹುತ್ತ ತೆರವಿಗೆ ಗುಂಡಿ ಅಗೆಯಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ‘ಗಂಡನ ವಿರುದ್ಧ ಯಾರೋ ಮಾಟ ಮಾಡಿಸಿ ಇಲ್ಲಿ ಅಡಗಿಸಿಟ್ಟಿದ್ದಾರೆ. ಅದನ್ನು ಹೊರ ತೆಗೆಯಲು ಗುಂಡಿ ತೋಡಿದ್ದೇವೆ’ ಎಂದು ಇಮ್ರಾನ್ ಪತ್ನಿ ನಜ್ಮಾ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.  
 
ಮಕ್ಕಳ ಕಲ್ಯಾಣ ಸಮಿತಿ ಮುಂದೆ ಜ.5ರಂದು ಮಗುವನ್ನು ಹಾಜರುಪಡಿಸಿ ವರದಿ ಸಲ್ಲಿಸಲಾಗುವುದು.  ಮಗುವಿನ ಹೆತ್ತವರು ಮತ್ತು ದತ್ತು ಪಡೆದ ದಂಪತಿಯ ವಿಚಾರಣೆ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ ತಿಳಿಸಿದ್ದಾರೆ.

ವಾಮಾಚಾರಕ್ಕೆ ಮನೆಯ ಒಳಗೆ ತೋಡಿರುವ ಗುಂಡಿ 
ವಾಮಾಚಾರದಿಂದ ಎಂಟು ತಿಂಗಳ ದತ್ತು ಮಗುವನ್ನು ರಕ್ಷಿಸಿದ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಗಳು 

ಮಗು ದತ್ತು ಪಡೆದಿದ್ದೇವೆ ಎಂದು ಸೈಯ್ಯದ್‌ ಇಮ್ರಾನ್‌ ಕುಟುಂಬ ಹೇಳುತ್ತಿದೆ. ಆದರೆ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ದಾಖಲೆ ತೋರಿಸಿಲ್ಲ

– ಶಿವಮ್ಮ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ

ನಿಧಿ ಆಸೆಗಾಗಿ ಮಗು ಬಲಿ ಕೊಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ. ಕಾನೂನುಬಾಹಿರವಾಗಿ ಮಗು ದತ್ತು ಪಡೆದಿರುವ ಹಾಗೂ ವಾಮಾಚಾರಕ್ಕೆ ಬಲಿ ಕೊಡಲು ಯತ್ನಿಸಿದ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು.

–ಶಶಿಧರ ಎಸ್. ಕೋಸಂಬೆ ಅಧ್ಯಕ್ಷ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 

ಮಗುವನ್ನು ಕಾನೂನುಬಾಹಿರವಾಗಿ ಕೋಲಾರ ದಂಪತಿಯಿಂದ ₹1 ಲಕ್ಷ ನೀಡಿ ಖರೀದಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ದತ್ತು ಪಡೆದ ಬಗ್ಗೆ ಕರಾರು ಪತ್ರ ಪತ್ತೆಯಾಗಿವೆ. ಮಗುವನ್ನು ವಾಮಾಚಾರಕ್ಕೆ ಬಳಸಲು ಯತ್ನಿಸಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

–ಡಾ. ಸ್ನೇಹಾ ನಿರ್ದೇಶಕಿ ಮಕ್ಕಳ ನಿರ್ದೇಶನಾಲಯ

ದತ್ತು ಪ್ರಕ್ರಿಯೆ ಗೊತ್ತಿಲ್ಲ

ನಮ್ಮ ತಂದೆಯ ಸ್ನೇಹಿತನ ಕಡೆಯ ಕೋಲಾರದ ಬಡ ದಂಪತಿಗೆ ಇಬ್ಬರು ಮಕ್ಕಳಿದ್ದರು. ಬಡತನದಿಂದಾಗಿ ಅವರಿಗೆ ಎರಡು ಮಕ್ಕಳ ಲಾಲನೆ ಪಾಲನೆ  ಕಷ್ಟವಾಗಿತ್ತು. ಹಾಗಾಗಿ ಬಡ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿ ಮಗು ದತ್ತು ಪಡೆದಿದ್ದೇವೆ. ಕಾನೂನು ಪ್ರಕಾರ ದತ್ತು ಪಡೆಯುವ ವಿಚಾರ ನಮಗೆ ಗೊತ್ತಿಲ್ಲ. ಆದರೆ ನಿಧಿ ಆಸೆಗಾಗಿ ಮಗು ಬಲಿ ಕೊಡುತ್ತಿದ್ದಾರೆ ಎಂಬುವುದು ಸುಳ್ಳು. ನಮ್ಮ ವಿರುದ್ಧ ಯಾರೋ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದರ ಹಿಂದೆ ಯಾರದೋ ಕೈವಾಡ ಇದೆ ಎಂದು ಮಗು ದತ್ತು ಪಡೆದ ಸೈಯ್ಯದ್‌ ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ.

ಮಗುವಿನ ಯೋಗಕ್ಷೇಮ ವಿಚಾರಿಸಿದ ಅಧಿಕಾರಿಗಳು

ದೇವನಹಳ್ಳಿ: ನಿಧಿ ಬಲಿಯಿಂದ ರಕ್ಷಿಸಿ ದೇವನಹಳ್ಳಿಯ ಶಿಶುಮಂದಿರದಲ್ಲಿ ಆಶ್ರಯ ನೀಡಲಾಗಿರುವ ಎಂಟು ತಿಂಗಳ ಮಗುವಿನ ಯೋಗಕ್ಷೇಮವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಎಸ್. ಕೋಸಂಬೆ ಹಾಗೂ ಮಕ್ಕಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಸ್ನೇಹಾ ಭಾನುವಾರ ವಿಚಾರಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಡಾ. ರಾಜಣ್ಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು. ಇಂದು ಪೋಷಕರ ವಿಚಾರಣೆ  ದೇವನಹಳ್ಳಿಯಲ್ಲಿ ಜ.5ರಂದು ಮಗು ಹೆತ್ತವರು ಮತ್ತು ದತ್ತು ಪಡೆದವರ ವಿಚಾರಣೆ ನಡೆಸಲಾಗುತ್ತದೆ. ಕಾನೂನಾತ್ಮಕವಾಗಿ ದತ್ತು ಪಡೆದಿದ್ದರೆ ಮಗು ಹಿಂದಿರುಗಿಸಲಾಗುವುದು. ಇಲ್ಲದಿದ್ದರೆ ಮಗುವಿನ ಹೆತ್ತ ತಂದೆತಾಯಿ ವಿರುದ್ಧ ಹಾಗೂ ಮಗು ಬಲಿ ಕೊಡಲು ವಾಮಾಚಾರ ಯತ್ನ ನಡೆದಿರುವುದು ಸಾಬೀತಾದರೆ ದತ್ತು ಪಡೆದ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು. ದೊಡ್ಡಬಳ್ಳಾಪುರದಲ್ಲಿ ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಶಿಶು ರಕ್ಷಣಾಧಿಕಾರಿ ಶ್ರೀಧರ್ ಯಾದವ್ ತಿಳಿಸಿದ್ದಾರೆ.

ದತ್ತು ಪಡೆಯುವುದು ಹೇಗೆ?

ಕಾನೂನುಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯುವುದು ಅಪರಾಧ. ದತ್ತು ಪ್ರಕ್ರಿಯೆಗೆ ಸರ್ಕಾರದಿಂದಲೇ ಅಗತ್ಯ ಸಹಾಯ ದೊರೆಯುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ‘ಮಮತೆಯ ತೊಟ್ಟಿಲು’ ಯೋಜನೆ ಹಾಗೂ ಮಕ್ಕಳ ಸಹಾಯವಾಣಿ 1098 ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಮಕ್ಕಳ ಖರೀದಿ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಮಕ್ಕಳ ನಿರ್ದೇಶನಾಲಯದ ನಿರ್ದೇಶಕಿ ಡಾ. ಸ್ನೇಹಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.