ಹೊಸಕೋಟೆ: ಮುಂದಿನಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ವಸತಿ ರಹಿತ ಬಡವರ್ಗದ ಜನರಿಗೆ ಮನೆಗಳನ್ನು ನೀಡುವುದಾಗಿ ವಸತಿ ಸಚಿವ ಬಿ ನಾಗರಾಜ್ ಅವರು ತಿಳಿಸಿದರು.
ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿಅವರು ಮಾತನಾಡುತ್ತಿದ್ದರು.
‘ನೆಹರು, ಗಾಂಧಿಯವರ ಪರಿಶ್ರಮದಿಂದ ಪಡೆದ ಸ್ವಾತಂತ್ರ್ಯ ಅನಂತರ ಅಂಬೇಡ್ಕರ್ ಅವರ ಸಂವಿಧಾನ ರಚನೆಯಿಂದ ದೇಶವನ್ನು ಒಂದುಗೂಡಿಸಿತು. ಇಂತಹ ದೇಶದಲ್ಲಿ ನಾವು ಒಂದಾಗಿ ಬಾಳಬೇಕು’ ಎಂದರು.
‘ನಾನು ವಸತಿ ಸಚಿವನಾದ ಮೇಲೆ ಮೂರು ಬಾರಿ ಅಧಿಕಾರಿಗಳ ಸಭೆ ಕರೆದು ರಾಜ್ಯದ ವಸತಿ ರಹಿತರ ಸಮಸ್ಯೆಯ ಬಗ್ಗೆ ಚರ್ಚಿಸಿ ಈಗಾಗಲೇ ಮನೆ ಕಟ್ಟಲು ಅನುಮತಿ ನೀಡಿದ್ದೇನೆ. ಅಂತಹವರಿಗೆ ಸರ್ಕಾರದಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ದೇವನಹಳ್ಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು ಈಗಾಗಲೇ ಸುಮಾರು 36 ಸರ್ಕಾರಿ ಇಲಾಖೆಗಳು ಅಲ್ಲಿಗೆ ಸ್ಥಳಾಂತರಗೊಂಡಿವೆ ಎಂದರು.
ಇದಕ್ಕೂ ಮುಂಚೆ ತಹಶೀಲ್ದಾರರಾದ ರಮೇಶ್ ಅವರು ಧ್ವಜಾರೋಹಣ ಮಾಡಿದರು. ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಧ್ವಜವಂದನೆ ನೀಡಿದರು. ತಹಶೀಲ್ದಾರರ ಜೊತೆ ನಗರಸಭೆಯ ಅಧ್ಯಕ್ಷ ಹೇಮಂತ್ ಕುಮಾರ್ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯದೇವಯ್ಯ ಭಾಗವಹಿಸಿದ್ದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.