ದೊಡ್ಡಬಳ್ಳಾಪುರ: ತಾಲ್ಲೂಕು ಕಚೇರಿ ವೃತ್ತದ ಸಮೀಪದಲ್ಲಿನ ಹಳೆಯ ಗುರುಭವನ ಕಟ್ಟಡವನ್ನು ಅಭಿವೃದ್ಧಿಪಡಿಸುವಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ₹ 25 ಲಕ್ಷ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.
ನಗರದ ಗುರುಭವನದಲ್ಲಿ ಚಿರಋಣಿ ಕನ್ನಾಡಾಂಬೆ ಹೋರಾಟ ಸಮಿತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಆಗುವ ಎಲ್ಲಾ ಅರ್ಹತೆ ದೊಡ್ಡಬಳ್ಳಾಪುರಕ್ಕೆ ಇದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕೈ ತಪ್ಪಿದೆ. ನೂರು ಕಿ.ಮೀ ದೂರದ ತುಮಕೂರಿನಿಂದ ಇಲ್ಲಿಗೆ ಹೇಮಾವತಿ ನೀರು ತರಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವದ ತಾರತಮ್ಯ ನೀತಿಯಾಗಿದೆ. ಇಂತಹ ವೈಫಲ್ಯಗಳಿಗೆ ನಮ್ಮಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನಿರ್ಮಾಣ ಆಗಿರುವ ರಾಜಕೀಯ ತಡೆಯಾಗಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಂಘಟನೆಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಚಿರಋಣಿ ಕನ್ನಾಡಾಂಬೆ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ರವಿ ಮಾವಿನಕುಂಟೆ, ಐದು ವರ್ಷದ ನಮ್ಮ ಸಂಘಟನೆಯ ದಾರಿಯಲ್ಲಿ ವಿಭಿನ್ನವಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ. ಈ ಹಂತದಲ್ಲಿ ನಾಡು, ನುಡಿಗಷ್ಟೆ ನಮ್ಮ ಹೋರಾಟಗಳ ಸೇವೆ ಸೀಮಿತವಲ್ಲ. ಕನ್ನಡಿಗರ ಬದುಕನ್ನು ಕಟ್ಟಿಕೊಳ್ಳವ ಹಂತದಲ್ಲಿಯೂ ನಮ್ಮ ಹೋರಾಟಗಳು ಸಾಗುತ್ತವೆ. ಅಲ್ಲದೆ ತೇಜಸ್ವಿನಿ ಗೌಡ ಅವರ ಜಿಲ್ಲಾ ಕೇಂದ್ರದ ಆಗ್ರಹಕ್ಕೂ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರು ಮತ್ತು ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಕೀಲ ಎ.ಆರ್. ನಾಗರಾಜನ್, ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲೀಕ ಡಾ.ಸಿ. ನಾಗರಾಜು, ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಸ್.ಎಸ್. ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಜಿ. ಅಶೋಕ್, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೈಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.