
ದೊಡ್ಡಬಳ್ಳಾಪುರ: ಹೊಸಕೋಟೆ ಬಳಿ ಏಳು ಯುವಕರನ್ನು ಬಲಿ ಪಡೆದ ಭೀಕರ ಅಪಘಾತ ಮಾಸುವ ಮುನ್ನವೇ ಪೀಣ್ಯ ದಾಸರಹಳ್ಳಿಯ ರಾಷ್ಟ್ರೀಯ ಹೆದ್ದಾರಿಯ ಜಿಂದಾಲ್ ಬಳಿ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಸೇರಿ ಐವರು ಯುವಕರು ಮೃತಪಟ್ಟಿದ್ದಾರೆ.
ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿದರೆ ಉಳಿದವರು ಕೂಲಿ, ಸಣ್ಣಪುಟ್ಟ ಕೆಲಸ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದರು. ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಗ, ಕೂಲಿ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದ ಮಕ್ಕಳ ಸಾವಿನಿಂದ ಕುಟುಂಬಗಳು ಕಂಗೆಟ್ಟಿವೆ.
ಮೃತ ಹರ್ಷಿತ್ ರಾಜಾನುಕುಂಟೆಯ ಸಾಯಿ ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ವಿದ್ಯಾರ್ಥಿ. ಗಂಗಾಧರಪುರ ಬಡಾವಣೆ ನಿವಾಸಿ ಲಲಿತ್ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕೆಲಸ ಮಾಡುತ್ತಿದ್ದ. ಧನುಷ್ ಮಗ್ಗದ ಕೆಲಸ ಮಾಡುತ್ತಿದ್ದ. ಕಲ್ಲುಪೇಟೆಯ ಕೇಶವ್ ಮತ್ತು ದುರ್ಗಾಪ್ರಸಾದ್ ಹೂವಿನ ಶೃಂಗಾರ (ಫ್ಲವರ್ ಡಕೋರೇಷನ್) ಕೆಲಸ ಮಾಡುತ್ತಿದ್ದರು.
ಎಲ್ಲರೂ ಸ್ನೇಹಿತರಾಗಿದ್ದು, ರಾತ್ರಿ ಲಾಂಗ್ ಡ್ರೈವ್ಗಾಗಿ ಕಾರಿನಲ್ಲಿ ಹೊರಟಿದ್ದರು. ಇದರಲ್ಲಿ ಬಹುತೇಕರು ಮನೆಯಲ್ಲಿ ಯಾರಿಗೂ ಮಾಹಿತಿ ನೀಡದೆ ಜಾಲಿ ರೈಡ್ಗೆ ತೆರಳಿದ್ದರು ಎನ್ನಲಾಗಿದೆ.
ಮೃತರ ಮೇಲಿತ್ತು ಪ್ರಕರಣ: ಕಾರು ಅಪಘಾತದಲ್ಲಿ ಮೃತಪಟ್ಟ ಯುವಕರಲ್ಲಿ ಲಲಿತ್ ಮತ್ತು ದುರ್ಗಾಪ್ರಸಾದ್ ಮೇಲೆ ನಗರ, ಗ್ರಾಮಾಂತರ, ರಾಜಾನುಕುಂಟೆ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕಳ್ಳತನ ಪ್ರಕರಣ ದಾಖಲಾಗಿದ್ದವು.
ಇವರ ಸ್ನೇಹ ಬೆಳೆಸಿದ್ದ ಧನುಷ್, ಕೇಶವ, ಹರ್ಷಿತ್ ಮೂವರಿಗೂ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ಠಾಣೆಗೆ ಕರೆಯಿಸಿ ಬುದ್ಧಿ ಹೇಳಿ ಕಳುಸಿದ್ದರು. ಅದಾದ ನಂತರವೂ ಸ್ನೇಹ ಬಿಡದ ಐವರು ಕೂಡಿಯೇ ಓಡಾಡುತ್ತಿದ್ದರು.
ಶನಿವಾರ ಸಹ ನಗರದಲ್ಲಿ ಬೇರೆ ಹುಡುಗರೊಂದಿಗೆ ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಬೇಸರದಲ್ಲಿ ಐವರೂ ಶನಿವಾರ ರಾತ್ರಿ 10 ಗಂಟೆಗೆ ಕಾರಿನಲ್ಲಿ ನೆಲಮಂಗಲದ ಕಡೆಗೆ ತೆರಳಿದ್ದರು.
ಲಲಿತ್, ಕೇಶವ, ದುರ್ಗಾಪ್ರಸಾದ್ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದಾರೆ. ನಗರದ ಮುಕ್ತಿಧಾಮದಲ್ಲಿ ನಾಲ್ವರ ಅಂತ್ಯಕ್ರಿಯೆ ನೆಡೆಯಿತು. ಹರ್ಷಿತ್ ಅಂತ್ಯಕ್ರಿಯೆ ತಿಂಡ್ಲು ಗ್ರಾಮದಲ್ಲಿ ನಡೆದಿದೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್ನ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಳೆದುಕೊಂಡ ತಾಯಿ ಗೋಳಾಟ ಮನಕಲುಕುವಂತಿತ್ತು. ಹರ್ಷಿತ್ ಶನಿವಾರ ರಾತ್ರಿ 8-30ಗೆ ಗೆಳೆಯರನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಮನೆಯಿಂದ ಹೋದವ ಹೆಣವಾಗಿ ಬಂದ ಎಂದು ಸಂಬಂಧಿಕರು ಹೇಳಿದ್ದರು.
ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಬಸ್ ಮುಂಭಾಗಕ್ಕೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.