ಕೆಜಿಎಫ್ ಬೆಮಲ್ ಕಾರ್ಖಾನೆಯೊಳಗೆ ಶನಿವಾರ ಗುತ್ತಿಗೆ ಕಾರ್ಮಿಕರ ಪ್ರವೇಶವನ್ನು ನಿರಾಕರಿಸಿದ ಕಾರಣ ಕಾರ್ಮಿಕರು ಮುಖ್ಯದ್ವಾರದ ಬಳಿ ಜಮಾಯಿಸಿರುವುದು
ಕೆಜಿಎಫ್: ಬೆಮಲ್ನಲ್ಲಿ ಉತ್ಪಾದನೆ ಕಡಿಮೆಯಾಗಿದ್ದರಿಂದ ಐದು ದಿನಗಳ ಕೆಲಸ ಎಂದು ಆಡಳಿತ ವರ್ಗ ಬೆಮಲ್ ಗುತ್ತಿಗೆ ಕಾರ್ಮಿಕರಿಗೆ ದಿಢೀರನೆ ರಜೆ ನೀಡಿದ್ದು, ಇದನ್ನು ವಿರೋಧಿಸಿ ಶನಿವಾರ ಸಾವಿರಾರು ಬೆಮಲ್ ಗುತ್ತಿಗೆ ಕಾರ್ಮಿಕರು ದಿಢೀರ್ ಮುಷ್ಕರ ನಡೆಸಿದರು.
ಯಾವುದೇ ಮುನ್ಸೂಚನೆ ನೀಡದೆ, ಕೆಲಸಕ್ಕೆ ಬಂದ ಕಾರ್ಮಿಕರನ್ನು ಒಳಗೆ ಬಿಡದೆ ಅಮಾನವೀಯವಾಗಿ ವರ್ತನೆ ಮಾಡಲಾಗಿದೆ ಎಂದು ದೂರಿ ಕಾರ್ಮಿಕರು ಕಾರ್ಖಾನೆಯ ಮುಖ್ಯದ್ವಾರದ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಆಡಳಿತ ವರ್ಗದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಡ್ಡಾಯ ರಜೆ ನೀಡುವ ಬಗ್ಗೆ ಕಾರ್ಮಿಕರಿಗೆ ಸುಳಿವು ಸಿಕ್ಕಿತ್ತು. ಆದರೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅಂತಹ ನಿರ್ಧಾರವನ್ನು ಬೆಮಲ್ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಕೆಲಸಕ್ಕೆ ಬಂದ ಕಾರ್ಮಿಕರನ್ನು ಪೊಲೀಸರನ್ನು ಅಡ್ಡ ಇಟ್ಟುಕೊಂಡು ಗೇಟ್ ಆಚೆ ನಿಲ್ಲಿಸಿದ್ದಾರೆ. ಲೇಆಫ್ ಎಂದು ಹೇಳುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರು ದೂರಿದರು. ನಂತರ ಬೆಮಲ್ ಅಧಿಕಾರಿಗಳು ಕೆಲ ಕಾರ್ಮಿಕ ಮುಖಂಡರನ್ನು ಕಾರ್ಖಾನೆಯೊಳಗೆ ಬಿಟ್ಟು ಮಾತುಕತೆ ನಡೆಸಿದರು.
ತಿಂಗಳಿಗೊಮ್ಮೆ ಕಡ್ಡಾಯವಾಗಿ ಆಫ್ ಎಂದು ಆಡಳಿತ ವರ್ಗ ಹೇಳುತ್ತಿದ್ದಾರೆ. ರಜೆ ಬಗ್ಗೆ ಕಾರ್ಮಿಕ ಸಂಘಕ್ಕೆ ಯಾವುದೇ ಮುನ್ಸೂಚನೆ ನೀಡಿಲ್ಲ. ಇದರಿಂದ ಕೆಲಸ ಹೋಗಲು ನಿರ್ಧರಿಸಿದ್ದೆವು. ಆದರೆ ಒಳಗೆ ಬಿಡಲಿಲ್ಲ. ಇವತ್ತು ಬೆಂಗಳೂರಿನ ಕಾರ್ಪೋರೇಟ್ ಕಚೇರಿ ರಜೆ ಇರುವುದರಿಂದ ಹೆಚ್ಚಿನ ಮಾತುಕತೆ ನಡೆಸಲು ಆಗುವುದಿಲ್ಲ. ಸೋಮವಾರದಂದು ಚರ್ಚೆನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ವಿವರಣೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು ಎಂದು ಕಾರ್ಮಿಕ ಮುಖಂಡ ರಾಜ ತಿಳಿಸಿದ್ದಾರೆ.
ಬೆಮಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.