ADVERTISEMENT

ಪ್ರಗತಿಪರ ತತ್ವ ಪ್ರತಿಪಾದಕ ಬಸವಣ್ಣ

​ಪ್ರಜಾವಾಣಿ ವಾರ್ತೆ
Published 7 ಮೇ 2019, 13:10 IST
Last Updated 7 ಮೇ 2019, 13:10 IST
ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖಂಡರು ಪೂಜೆ ಸಲ್ಲಿಸಿದರು
ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖಂಡರು ಪೂಜೆ ಸಲ್ಲಿಸಿದರು   

ವಿಜಯಪುರ: ‘ಪ್ರಗತಿಪರ ತತ್ವಗಳನ್ನು ಜಾರಿಗೆ ತರಲು ಈ ಆಧುನಿಕ ಕಾಲದಲ್ಲೂ ಕಷ್ಟ ಸಾಧ್ಯವಾದರೂ 12ನೇ ಶತಮಾನದಲ್ಲೇ ಅವುಗಳನ್ನು ಜಾರಿಗೆ ತರಲು ವಿಶ್ವಗುರು ಬಸವಣ್ಣ ಪ್ರಯತ್ನಿಸಿದ್ದರು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಸಹಪೋಷಕ ವಿ.ಎಸ್.ರಮೇಶ್ ಹೇಳಿದರು.

ಇಲ್ಲಿನ ವಿ.ಎಸ್.ಆರ್. ಕನ್ವೆನ್ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ಎಲ್ಲಾ ವರ್ಗದವರನ್ನೂ ಇವ ನಮ್ಮವ ಇವ ನಮ್ಮವ ಎಂದು ಒಂದುಗೂಡಿಸಿ, ಜಾತೀಯತೆಯ ವಿರುದ್ಧ ಸಮರ ಸಾರಿದವರು ಬಸವಣ್ಣ. ನಮ್ಮ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆಯೇ ವಿನಃ ಜಾತಿಯಿಂದಲ್ಲ. ಎಲ್ಲ ಜಾತಿ ವರ್ಗದ ಜನರನ್ನು ಸನ್ಮಾರ್ಗದ ಕಡೆಗೆ ಮುನ್ನಡೆಸಲು ಪ್ರಯತ್ನಿಸಿದ್ದವರು ಬಸವಣ್ಣ’ ಎಂದರು.

ADVERTISEMENT

ಮುಖಂಡ ಶಾಂತವೀರಯ್ಯ ಮಾತನಾಡಿ, ‘ನೆಲದಲ್ಲಿ ಶಿವಾಲಯ ಕಟ್ಟಿದರೆ ಪುಣ್ಯಕ್ಷೇತ್ರವಾಗುತ್ತದೆ. ನೀರು ಪೂಜೆಗೆ ಬಳಸಿದರೆ ತೀರ್ಥ. ಶೌಚಕ್ಕೆ ಬಳಸಿದರೆ ಕೊಳಕು ನೀರು, ಅಂತೆಯೇ ನಾವು ಮಾಡುವ ಕಾರ್ಯಗಳಿಂದ ಮಾನವ ಕುಲ ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧರ್ಮ, ಎಲ್ಲಾ ಜಾತಿಗಳ ಗುರಿ ಒಂದೇ ಅದು ಮುಕ್ತಿಯ ಮಾರ್ಗ. ಜಾತಿಯಿಂದ ಮೇಲು ಕೀಳು ಎಂದು ವಿಂಗಡಿಸಬೇಡಿ ಎಂದು ಬಸವಣ್ಣ ಬೋಧಿಸಿದ್ದಾರೆ’ ಎಂದರು.

‘ಬಸವಣ್ಣನವರು ಅರಿವೇ ಗುರು ಎಂದು ಜಗತ್ತಿಗೆ ಸಾರಿದವರು. ಜನರ ಬದುಕು ಮುಖ್ಯವೇ ಹೊರತು ನಿಯಮಗಳಲ್ಲ. ಆದ್ದರಿಂದಲೇ ಕಂದಾಚಾರ, ಮೂಢನಂಬಿಕೆ ಡಂಭಾಚಾರದ ಕ್ರಿಯಾವಿಧಿಗಳನ್ನು ಬಸವಣ್ಣ ನಿರಾಕರಿಸಿ ಸರಳ ಧರ್ಮವನ್ನು ಜನರಿಗೆ ನೀಡಿದರು’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಉಪಪೋಷಕ ಗುರುಪ್ರಸಾದ್ ಮಾತನಾಡಿ, ‘ದುಡಿದು ತಿನ್ನುವ ಪ್ರವೃತ್ತಿ ಕಡಿಮೆಯಾಗಿದೆ. ತಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ನೀಡುವ ನಿಜಗುಣವಿರುವ ಕಡೆಯಲ್ಲಿ ದೇವರು ಇರುತ್ತಾರೆ. ತೋರಿಕೆಗಾಗಿ ಕೆಲಸ ಮಾಡಬಾರದು. ಯಾರು ಆಡಂಬರವಿಲ್ಲದೆ ತೋರಿಕೆಯಿಲ್ಲದೆ ಕೆಲಸ ಮಾಡುವರೋ ದಾನ ಮಾಡುವರೋ ಅವರಲ್ಲಿ ದೇವರು ಇರಬಯಸುತ್ತಾನೆ. ಅನುಭಾವದ ಸಾರವನ್ನು ಉಣಿಸುವಂತಹ ಜಯಂತಿ ಆಗಬೇಕು. ಆತ್ಮಾವಲೋಕನ, ವಿಮರ್ಶೆ ಮಾಡಿಕೊಳ್ಳುವ ಜಯಂತಿ ಆಗಬೇಕು’ ಎಂದರು.

ರಾಜಮ್ಮ, ಮೂರ್ತಿ, ಮಂಜುನಾಥ್, ಜಯಂತ್, ಶಿವಕುಮಾರ್, ಪವಿತ್ರ, ಮಹೇಶ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.