ಅಥಣಿ (ಬೆಳಗಾವಿ ಜಿಲ್ಲೆ): ಜಿಲ್ಲೆಯ ಅಥಣಿ ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದ ಬಳಿ ಶುಕ್ರವಾರ ಕಾರು ಕಾಲುವೆಗೆ ಬಿದ್ದು ಯುವಕರಿಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಈಜಿ ಪ್ರಾಣ ಉಳಿಸಿಕೊಂಡಿದ್ದಾರೆ.
ಸುರೇಶ ತುಕಾರಾಮ್ ಪೂಜೇರಿ (28) ಹಾಗೂ ಮಹಾದೇವ ಶ್ರೀಶೈಲ ಚಿಗರಿ (24) ಮೃತಪಟ್ಟವರು. ಶ್ರೀಕಾಂತ ನಾಗಪ್ಪ ನಡುವಿನಮನಿ (25) ಕಾರಿನ ಗಾಜು ಒಡೆದು ಈಜಿ ದಡ ಸೇರಿದ್ದಾರೆ. ಮೂವರು ರಡ್ಡೇರಹಟ್ಟಿ ಗ್ರಾಮದ ನಿವಾಸಿಗಳು.
ಈ ಮೂವರೂ ಸ್ನೇಹಿತರಾಗಿದ್ದು, ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಸುತ್ತಾಡಲು ಹೊರಟಿದ್ದರು. ರಡ್ಡೇರಹಟ್ಟಿಯಿಂದ ತುಸು ದೂರ ಸಾಗಿದ ಮೇಲೆ ಕರಿಮಸೂತಿ ಏತನೀರಾವರಿಯ ಕಾಲುವೆ ಮೇಲಿನ ರಸ್ತೆಯಲ್ಲಿ ವೇಗವಾಗಿ ಕಾರು ಓಡಿಸಿದರು. ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿತ್ತು.
ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಯುವಕರ ನೆರವಿಗೆ ಬಂದರು. ಕಾಲುವೆಯಲ್ಲಿ ನೀರು ರಭಸದಿಂದ ಹರಿಯುತ್ತಿರುವ ಕಾರಣ ನೀರಿನಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಗ್ರಾಮದಿಂದ ಕ್ರೇನ್ ತರಿಸಿ ಕಾರನ್ನು ಮೇಲೆತ್ತಲಾಯಿತು. ಅದರಲ್ಲಿ ಸುರೇಶ ಹಾಗೂ ಮಹಾದೇವ ಅವರ ದೇಹಗಳು ಸಿಕ್ಕವು.
ಅಥಣಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.