
ಬೆಳಗಾವಿ: ತಾಲ್ಲೂಕಿನ ಬೋಡಕ್ಯಾನಟ್ಟಿ ಗ್ರಾಮದಲ್ಲಿ ಬುಧವಾರ, ಪಾನ್ಶಾಪ್ ಅಂಗಡಿಯಲ್ಲಿ ಸಿಗರೇಟ್ ಹಣ ಕೇಳಿದ ಅಂಗಡಿ ಮಾಲೀಕನನ್ನು ನಾಲ್ವರು ಯುವಕರು ಹೊಡೆದು ಕೊಂದಿದ್ದಾರೆ.
ಬೋಡಕ್ಯಾನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದವರು. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ ಚೌಗಲೆ(22), ವಿವೇಕ್ ರಾಜೇಂದ್ರ ಚೌಗುಲೆ(22) ಮತ್ತು ಶ್ರೀಧರ್ ರತನ್ ಪಾಟೀಲ (21) ಆರೋಪಿಗಳು.
ಹುಕ್ಕೇರಿ ತಾಲ್ಲೂಕಿನ ದಡ್ಡಿ ಬಳಿಯ ಮೋಹನಗಾ ಜಾತ್ರೆ ಮುಗಿಸಿ ಬರುತ್ತಿದ್ದ ವೇಳೆ ನಾಲ್ವರು ಯುವಕರು ಮದ್ಯ ಕುಡಿದ ನಶೆಯಲ್ಲಿ ಸಿಗರೇಟ್ ಸೇದುವ ಸಂಬಂಧ ಬೋಡಕ್ಯಾನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿದ್ದರು. ಅಂಗಡಿ ಮಾಲೀಕ ಯಲ್ಲಪ್ಪ ಸಿಗರೇಟ್ ಮತ್ತು ನೀರಿನ ಬಾಟಲಿ ಕೊಟ್ಟಿದ್ದಾರೆ. ಅಲ್ಲಿಯೇ ಅವರೆಲ್ಲ ಸಿಗರೇಟ್ ಸೇದಿದ್ದಾರೆ. ನಂತರ ಸಿಗರೇಟ್ ಮತ್ತು ನೀರಿನ ಬಾಟಲಿ ದುಡ್ಡು ಕೇಳಿದ ಅಂಗಡಿ ಮಾಲೀಕ ಯಲ್ಲಪ್ಪನ ಜೊತೆಗೆ ಜಗಳ ತೆಗೆದಿದ್ದಾರೆ.
ನಾಲ್ವರೂ ಯಲ್ಲಪ್ಪ ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದರಿಂದ ಅವರು ಅಸ್ವಸ್ಥರಾದರು. ಸ್ಥಳೀಯರು ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯದಲ್ಲಿ ಯಲ್ಲಪ್ಪ ಕೊನೆಯುಸಿರೆಳೆದರು ಎಂದು ಕುಟುಂಬದವರು ದೂರು ದಾಖಲಿಸಿದ್ದಾರೆ.
ಕಾಕತಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಲಾರಿ ಚಾಲಕನಿಗೆ ಇರಿತ: ನಗರದ ಕ್ಲಬ್ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಲಾರಿ ಚಾಲಕನಿಗೆ ಚಾಕುವಿನಿಂದ ಅಮಾನುಷ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡ ಚಾಲಕ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರುಕ್ಮಿಣಿ ನಗರ ನಿವಾಸಿ ಅಯ್ಯಾಜ್ ಸಾವನೂರು ಹಲ್ಲೆಗೆ ಒಳಗಾದವರು. ಸರಕು ತುಂಬಿಕೊಂಡ ಲಾರಿಯನ್ನು ಚಲಾಯಿಸುತ್ತಿದ್ದ ವೇಳೆ, ಹಿಂಡಲಗಾ ಗ್ರಾಮದ ಸಮೀಪ ಎದುರಿನ ಕಾರಿಗೆ ಸ್ವಲ್ಪ ತಾಗಿದೆ. ಸಣ್ಣ ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಮುಂದೆ ಹೋದ ಕಾರಣ, ಕಾರಿನಲ್ಲಿದ್ದವರು ಸಿಟ್ಟಿಗೆದ್ದು ಲಾರಿಯನ್ನು ಬೆನ್ನಟ್ಟಿ ನಿಲ್ಲಿಸಿದರು.
ಮಾಜಿ ಸಚಿವ ಬಿ. ಶಂಕರಾನಂದ ಪ್ರತಿಮೆ ಬಳಿ ಲಾರಿಯನ್ನು ಅಡ್ಡಗಟ್ಟಿ, ಚಾಲಕನನ್ನು ಮನಸೋ ಇಚ್ಚೆ ಥಳಿಸಿದರು. ಲಾರಿಯ ಗಾಜುಗಳನ್ನೂ ಪುಡಿಪುಡಿ ಮಾಡಿದರು.
ಚಾಲಕನ ಚೀರಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಗಾಯಗೊಂಡ ಚಾಲಕನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಈ ಬಗ್ಗೆ ಕ್ಯಾಂಪ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.
ಅಪಘಾತ: ಸಾವು: ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ವೇಗವಾಗಿ ಹೊರಟಿದ್ದ ಟ್ರಕ್ಕೊಂದು, ಮುಂದೆ ಹೊರಟಿದ್ದ ವಾಹನಕ್ಕೆ ಡಿಕ್ಕಿಹೊಡೆದು ಒಬ್ಬ ಮೃತಪಟ್ಟು, ಇನ್ನೊಬ್ಬರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಮಹಾರಾಷ್ಟ್ರ ಮೂಲದ ಅಂಕುಶ ಭಗವಾನ್ ಸಾಳುಂಕೆ (46) ಮೃತಪಟ್ಟ ಟ್ರಕ್ ಚಾಲಕ. ಮುಂದೆ ಹೊರಟಿದ್ದ ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆದ ಟ್ರಕ್ ರಸ್ತೆ ಬದಿಗೆ ಬಿದ್ದಿದರಿಂದ ಅಪಘಾತ ಸಂಭವಿಸಿದೆ ಎಂದು ಯಮಕನಮರಡಿ ಪೊಲೀಸರು ತಿಳಿಸಿದ್ದಾರೆ.
₹15.90 ಲಕ್ಷ ವಂಚನೆ ಗೋಕಾಕ: ಮೂಲತಃ ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಶಿರಗುಪ್ಪಿ ಮೂಲದ ಗೋಕಾಕ ನಿವಾಸಿಗಳಾದ ಮೂವರು ಆರೋಪಿಗಳು ಹೆಚ್ಚಿನ ಲಾಭ ಕೊಡಿಸುವ ಭರವಸೆ ನೀಡಿ ಹೂಡಿಕೆ ಮಾಡಿಸಿ ₹15.90 ಲಕ್ಷ ಪಂಗನಾಮ ಹಾಕಿದ್ದಾರೆ. ಜಮಖಂಡಿ ತಾಲ್ಲೂಕಿನ ಶಿರಗುಪ್ಪಿಯ ಬಾಬಣ್ಣ ಮಲ್ಲಪ್ಪ ಕ್ಯಾಬನ್ನವರ ಗೋಕಾಕದ ಬಾಳಪ್ಪ ಗದಿಗೆಪ್ಪ ಮೈಲಾರಿ ನವೀನ ಮೋಹನ ಕೋರಾಡಿ ಮತ್ತು ಹನಮಂತ ಕಲ್ಲಪ್ಪ ಮಲ್ಲಾಡಿ ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಂಡವರು. ಈ ಬಗ್ಗೆ ಗೋಕಾಕ ಪೊಲೀಸರು ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ರಾಮಚಂದ್ರ ರಾಜಶೇಖರ ಶಿಂಧೆ ಮತ್ತು ಪತ್ನಿ ರುಕ್ಮಣಿ ಬೆಳಗಾವಿ ಜಿಲ್ಲೆಯ ಈರಣ್ಣ ಬಾಳಣ್ಣ ಜಕರವರ ಮತ್ತು ಇವರ ಪತ್ನಿ ರತ್ನಮಾಲಾ ಎಂಬುವವರು ಮೂವರನ್ನು ಪುಸಲಾಯಿಸಿ ಗೋವಾ ಮೂಲದ ನಟ್ಟೀ ಟ್ರೀಟ್ಸ್ ಡ್ರೈ ಫ್ರುಟ್ ಕಂಪನಿಯಲ್ಲಿ ಹಣ ಹೂಡುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೇ ನಾಲ್ವರು ಕಳೆದ ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ ಅಂಥದ್ದೇ ಮತ್ತೊಂದು ಕೃತ್ಯವನ್ನು ಎಸಗಿ ₹51.50 ಲಕ್ಷ ಲಪಟಾಯಿಸಿದ್ದಾರೆ ಎಂದು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಕಳೆದ 31ರಂದು ದೂರು ದಾಖಲಾಗಿದೆ.
ಬಸ್ಸಿನಲ್ಲಿ ಕಳವು: ಮಹಿಳೆಯರಿಬ್ಬರ ಬಂಧನ ಬೆಳಗಾವಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಮಾರ್ಕೆಟ್ ಪೊಲೀಸರು ₹11.25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ವಡ್ಡರವಾಡಿ ಮೂಲದ ಆರತಿ ಅಲಿಯಾಸ್ ಪರೀದಾ ಚೌಗುಲೆ (26) ಮತ್ತು ಸರಸ್ವತಿ ರೋಖಡೆ (45) ಬಂಧಿತರು. 2024ರಲ್ಲಿ ಇವರು ನಾಲ್ಕು ಬಾರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತನಿಖಾ ತಂಡದ ನೇತೃತ್ವ ವಹಿಸಿದ್ದ ಮಾರ್ಕೆಟ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ತಿಳಿಸಿದ್ದಾರೆ. ಬಂಧಿತ ಮಹಿಳೆಯರು ಕದ್ದ ಚಿನ್ನಾಭರಣಗಳನ್ನು ಆರತಿ ಎಂಬಾಕೆಯ ಪತಿ ಶಿವಾ ಚೌಗುಲೆ ಎಂಬಾತನಿಗೆ ನೀಡುತ್ತಿದ್ದರು. ಈತ ಆಭರಣಗಳನ್ನು ಕರಗಿಸಿ ಬೆಳಗಾವಿಯ ಖಾಸಗಿ ಫೈನಾನ್ಸ್ ಒಂದರಲ್ಲಿ ಅಡವಿಟ್ಟು ಹಣ ಪಡೆದಿದ್ದ. ಪೊಲೀಸರು ಫೈನಾನ್ಸ್ನಿಂದ 176 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಶಿವಾ ಚೌಗುಲೆಗಾಗಿ ಹುಡುಕಾಟ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.