ADVERTISEMENT

ಬೆಳಗಾವಿ | ಗೌಂಡವಾಡದಲ್ಲಿ ಪರಿಸ್ಥಿತಿ ಹತೋಟಿಗೆ: ಕಮಿಷನರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 21:06 IST
Last Updated 18 ಜೂನ್ 2022, 21:06 IST
   

ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳು ಹಾಗೂ ದೊಂಬಿ ನಡೆಸಿದ 15 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ' ಎಂದು ನಗರ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ತಿಳಿಸಿದರು.

ಭಾನುವಾರ ನಸುಕಿನ 2ಕ್ಕೆ ಸ್ಥಳಕ್ಕೆ ಧಾವಿಸಿದ ಅವರು ಪರಿಸ್ಥಿತಿ ಅವಲೋಕಿಸಿ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

'ಶನಿವಾರ ರಾತ್ರಿ ನಡೆದ ಕೊಲೆ ಇಬ್ಬರು ವ್ಯಕ್ತಿಗಳ ಮಧ್ಯೆ ಕಾರ್ ಪಾರ್ಕಿಂಗ್ ಮಾಡುವುದಕ್ಕೆ ಸಂಬಂಧಿಸಿದ್ದು. ಮೇಲ್ನೋಟಕ್ಕೆ ಇದು ಹಳೆಯ ದ್ವೇಷಕ್ಕೆ ಸಂಬಂಧಿಸಿ ನಡೆದಿದೆ ಎಂದು ಅನುಮಾನ ಬಂದಿದೆ. ಕೂಲಂಕಶವಾಗಿ ಪರಿಶೀಲಿಸಲಾಗುವುದು' ಎಂದು ಅವರು ಹೇಳಿದರು.

'ಬೋರೇನಾಥ ದೇವಸ್ಥಾನದ ಜಾಗವನ್ನು ಅತಿಕ್ರಮಣ ಮಾಡಿ ವ್ಯಕ್ತಿಯೊಬ್ಬರು ಮನೆ ಕಟ್ಟಿದ್ದಾರೆ ಎಂಬ ಬಗ್ಗೆ ಇದೇ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ಜಗಳ ನಡೆದಿತ್ತು. ಮುಂದೆ ಅದು ಎರಡು ಸಮುದಾಯಗಳ ನಡುವಿನ ವೈಷಮ್ಯವಾಗಿ ಮಾರ್ಪಟ್ಟಿತ್ತು. ಆದರೆ, ಗ್ರಾಮದ ಹಿರಿಯರು ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಮತ್ತೆ ಸಮಸ್ಯೆ ತಲೆದೋರಿತ್ತು. ಶನಿವಾರ ರಾತ್ರಿ ನಡೆದ ಕೊಲೆಗೂ ಇದಕ್ಕೂ ಏನು ಸಂಬಂಧ ಇದೆ ಎಂದು ಕಂಡುಕೊಳ್ಳಬೇಕಿದೆ' ಎಂದೂ ಅವರು ತಿಳಿಸಿದರು.

ಇದನ್ನೂ ಓದಿ:

'ಘಟನೆಯಲ್ಲಿ ಹಲವು ವಾಹನಗಳು ಬೆಂಕಿಗಾಹುತಿ ಆಗಿವೆ. ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಲ್ಲಿ ಯಾರಿಗೂ ಪ್ರಾಣಾಪಾಯ ಇಲ್ಲ. ಪೊಲೀಸ್ ತುಕಡಿಗಳು ಗ್ರಾಮದಲ್ಲಿಯೇ ಬೀಡುಬಿಟ್ಟಿದ್ದು, ಸರ್ಪಗಾವಲು ಏರ್ಪಡಿಸಲಾಗಿದೆ. ಜನ ಭಯಪಡಬೇಕಿಗಿಲ್ಲ. ಬೆಳಗಾವಿ ನಗರ ಹಾಗೂ ಸುತ್ತಲಿನ ಜನ ಗಾಳಿಮಾತಿಗೆ ಕಿವಿಗೊಡದೇ ಸಂಯಮದಿಂದ ವರ್ತಿಸಬೇಕು' ಎಂದೂ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.