ADVERTISEMENT

ಜೆಡಿಎಸ್‌ ಜೊತೆ ಮರು ಮೈತ್ರಿಯ ಬಗ್ಗೆಯೂ ಚಿಂತಿಸುತ್ತಿದ್ದೇವೆ: ಕೆ.ಸಿ.ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 7:51 IST
Last Updated 2 ಡಿಸೆಂಬರ್ 2019, 7:51 IST
   

ಬೆಳಗಾವಿ: ‘ಜೆಡಿಎಸ್‌ ಜೊತೆಗೆ ಮರು ಮೈತ್ರಿ ಮಾಡಿಕೊಳ್ಳುವ ವಿಚಾರವೂ ಸೇರಿಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಎಲ್ಲಾ ಪ್ರಯತ್ನವನ್ನೂ ಕಾಂಗ್ರೆಸ್ ಮಾಡುತ್ತದೆ,’ ಎಂದು ಕೆ‍ಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಗೋಕಾಕ್‌ನಲ್ಲಿ ಲಖನ್‌ ಜಾರಕಿಹೊಳಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆದಿದೆ. ಈ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಯಡಿಯೂರಪ್ಪಗೆ ಜನಾದೇಶವಿಲ್ಲ’ ಎಂದ ಟೀಕಿಸಿದರು.

‘ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಶಯವನ್ನು ಕಾಪಾಡುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕೆ ಕಾಂಗ್ರೆಸ್‌ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ,’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಜೊತೆ ಮರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಮಾತನ್ನು ಅಲ್ಲಗಳೆದ ವೇಣುಗೋಪಾಲ್‌,‘ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿ ನಮ್ಮೆಲ್ಲರ ಧನಿ ಒಂದೇ ಆಗಿದೆ. ಡಿಸೆಂಬರ್‌ 9 ಅನ್ನು ಪ್ರಜಾಪ್ರಭುತ್ವಕ್ಕೆ ಉತ್ತಮ ದಿನವನ್ನಾಗಿಸುವುದು ನಮ್ಮ ಗುರಿ,’ ಎಂದರು.

‘ಗುಜರಾತ್‌ ಮತ್ತು ಮಹಾರಾಷ್ಟ್ರದ ಜನ ಪಕ್ಷಕ್ಕೆ ಮೋಸ ಮಾಡಿದ ಶಾಸಕರಿಗೆ ಉತ್ತಮ ಪಾಠ ಕಲಿಸಿದ್ದಾರೆ. ಈಗ ಆ ಅವಕಾಶ ರಾಜ್ಯದ ಜನರ ಮುಂದಿದೆ. ಪಕ್ಷಾಂತರಿಗಳನ್ನು ಸೋಲಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. ಜನತೆಗೆ ಮೋಸ ಮಾಡಿದ ಶಾಸಕರನ್ನು ಗೆಲ್ಲಿಸಿದರೆ, ದೇಶಕ್ಕೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ,’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.