ಬೆಳಗಾವಿ: ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಅವರ ಚಾಲಕ ಬಸ್ ಡಿಪೊದಲ್ಲಿನ ಬಂಕ್ನಿಂದಲೇ ಶುಕ್ರವಾರ ಡೀಸೆಲ್ ತುಂಬಿಸಿಕೊಂಡರು.
ನಗರದ 3ನೇ ಬಸ್ ಡಿಪೊದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ ವಿಶ್ರಾಂತಿ ಗೃಹದ ಉದ್ಘಾಟನೆಗೆಂದು ಸವದಿ ಆ ವಾಹನದಲ್ಲಿ ಬಂದಿದ್ದರು. ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ಇತ್ತ ಡಿಪೊದಲ್ಲಿನ ಬಂಕ್ನಿಂದ ಚಾಲಕ ಇಂಧನ ತುಂಬಿಸಿಕೊಂಡರು.
ಸರ್ಕಾರಿ ಸಾರಿಗೆ ಬಸ್ಗಳಿಗೆ ಇಂಧನಕ್ಕಾಗಿ ಈ ಬಂಕ್ ತೆರೆಯಲಾಗಿದೆ. ಆದರೆ, ಸಚಿವರು ಇಲ್ಲಿ ಪ್ರವಾಸಕ್ಕೆ ಬಳಸುವ ತಮ್ಮ ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸವದಿ, ‘ಡಿಪೊದಲ್ಲಿ ಡೀಸೆಲ್ ಹಾಕಿಸಿದ ವಿಷಯ ಬಳಿಕ ಗೊತ್ತಾಯಿತು. ನನ್ನ ಖಾಸಗಿ ಚಾಲಕನ ಅಚಾತುರ್ಯದಿಂದ ಹೀಗಾಗಿದೆ. ಆತ ಬಂಕ್ ಬಗ್ಗೆ ವಿಚಾರಿಸಿದ ಅವರಿಗೆ ಅಲ್ಲಿನ ಸಿಬ್ಬಂದಿ ಇಲ್ಲೇ ಹಾಕುತ್ತೇವೆ ಎಂದು ಹೇಳಿ ತುಂಬಿಸಿದರಂತೆ. ಒಟ್ಟಿನಲ್ಲಿ ಇದರಿಂದ ನಾನು ಮುಜುಗರಕ್ಕೆ ಒಳಗಾಗುವಂತಾಗಿದೆ’ ಎಂದರು.
‘ಖಾಸಗಿ ವಾಹನಗಳಿಗೆ ಹೀಗೆ ಡೀಸೆಲ್ ಹಾಕಿಸಿಕೊಳ್ಳಲು ನಿಮಯದ ಪ್ರಕಾರ ಅವಕಾಶವಿಲ್ಲ. ನಾನೀಗ ಹಣ ತುಂಬುತ್ತೇನೆ ಎಂದರೂ ಆಗುವುದಿಲ್ಲ. ಹೀಗಾಗಿ, ನಿರಾಕರಿಸದ ಡಿಪೊ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಚಾಲಕನಿಗೂ ಎಚ್ಚರಿಕೆ ನೀಡಿದ್ದೇನೆ’ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.