ಬೆಳಗಾವಿ: ‘ಕೊರೊನಾದಿಂದಾಗಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಹಲವಾರು ಉದ್ಯೋಗಸ್ಥರಲ್ಲಿ ವೃತ್ತಿನಿರತ ಛಾಯಾಗ್ರಾಹಕರೂ ಸೇರಿದ್ದಾರೆ. ಇಡೀ ವಿಶ್ವಕ್ಕೇ ಬಿಕ್ಕಟ್ಟು ಉಂಟಾಗಿರುವುದರಿಂದ ಛಾಯಾಗ್ರಾಹಕರು ಧೃತಿಗೆಡಬಾರದು’ ಎಂದು ಹಿರಿಯ ಛಾಯಾಗ್ರಾಹಕ ಎಂ.ಬಿ. ಗೌಡ ಹೇಳಿದರು.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯಿಂದ ಕೈಗೊಂಡಿರುವ ‘ಹಸಿದವರತ್ತ ನಮ್ಮ ಚಿತ್ತ’ ಅಭಿಯಾನದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ 30 ವೃತ್ತಿನಿರತ ಛಾಯಾಗ್ರಾಹಕರಿಗೆ ಆಹಾರಧಾನ್ಯದ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
‘ಸಮಾಜ ಸೇವಕಿ ಶೈಲಜಾ ಭಿಂಗೆ ಮತ್ತು ಸಾಹಿತಿ ಜಯಶೀಲಾ ಬ್ಯಾಕೋಡ ಅವರು ಆಹಾರ ಧಾನ್ಯ ನೀಡಿದ್ದಾರೆ. ಕೋವಿಡ್–19 ಲಾಕ್ಡೌನ್ನಿಂದಾಗಿ ಮದುವೆ ಮೊದಲಾದ ಶುಭ ಸಮಾರಂಭಗಳು ನಡೆಯದೆ ಛಾಯಾಗ್ರಾಹಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ವರ್ಗದವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. 2018ರಲ್ಲಿ ಪ್ರವಾಹ ಬಂದಾಗ ಕೊಡಗಿಗೆ ಹೋಗಿ ನೆರವಾಗಿದ್ದರು. ಹೋದ ವರ್ಷ ಪ್ರವಾಹದ ಸಂದರ್ಭದಲ್ಲಿ ಜಿಲ್ಲೆಯ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದರು’ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು.
ಶಂಕರ ಬಾಗೇವಾಡಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.