
ಬೆಳಗಾವಿ: ಪರೀಕ್ಷಾಪೂರ್ವ ಸಿದ್ಧತಾ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್), ಭಾರತೀಯ ಸೇನೆಯೊಂದಿಗೆ ಮಹತ್ವದ ಒಪ್ಪಂದಕ್ಕೆ ಈಚೆಗೆ ಸಹಿ ಹಾಕಿದೆ ಎಂದು ಎಸ್.ಆರ್.ಎ.ಡಿ ವಿಕ್ರಮ್ ಚಕ್ರವರ್ತಿ ಹಾಗೂ ಎ.ಎಸ್.ಎಚ್. ಎಚ್.ಆರ್. ಅನಿಲಕುಮಾರ್ ತಿಳಿಸಿದರು.
ನಗರದಲ್ಲಿ ಈಚೆಗೆ ಜಂಟಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಈ ಒಪ್ಪಂದದ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ನಿವೃತ್ತರು, ಶೌರ್ಯ ಪ್ರಶಸ್ತಿ ಪುರಸ್ಕೃತರು, ಅಂಗಲವಿಕಲ ಸಿಬ್ಬಂದಿ ಮತ್ತು ಹುತಾತ್ಮ ಸೈನಿಕರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಬೆಂಬಲ ಸಿಗಲಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಕಲ್ಯಾಣ ವಿಭಾಗದ ಕರ್ನಲ್ ಹಾಗೂ ಎಇಎಸ್ಎಲ್ನ ಮುಖ್ಯಸ್ಥ ಡಾ.ಯಶ್ಪಾಲ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು’ ಎಂದರು.
‘ಈ ಯೋಜನೆಯಡಿ ದೇಶದಾದ್ಯಂತ ಇರುವ ಆಕಾಶ್ ಕೇಂದ್ರಗಳಲ್ಲಿ ಪ್ರಯೋಜನಗಳು ಲಭ್ಯವಿವೆ. ಹುತಾತ್ಮರ ಮಕ್ಕಳಿಗೆ ನೋಂದಣಿ ಶುಲ್ಕ ಬಿಟ್ಟು ಉಳಿದ ಎಲ್ಲ ಶುಲ್ಕಗಳಲ್ಲಿ ಶೇ 100 ವಿನಾಯಿತಿ ಸಿಗಲಿದೆ. ಅಂಗವಿಕಲ ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ 100, ನಿವೃತ್ತರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ 20 ರಿಯಾಯಿತಿ ಇದೆ’ ಎಂದು ತಿಳಿಸಿದರು.
‘ನಮ್ಮ ವೀರ ಸೈನಿಕರ ತ್ಯಾಗವನ್ನು ಗೌರವಿಸಲು ಮತ್ತು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿ ವೇತನದ ಜೊತೆಗೆ ವೃತ್ತಿ ಮಾರ್ಗದರ್ಶನವನ್ನೂ ನೀಡಲಾಗುವುದು’ ಎಂದು ಎಇಎಸ್ಎಲ್ ಸಿಇಒ ಚಂದ್ರಶೇಖರ್ ಗರಿಸಾ ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.