
ಅಥಣಿ: ಮೊಬೈಲ್ ತಂತ್ರಜ್ಞಾನ ಅಗತ್ಯವಿದೆ. ಆದರೆ ನಾವು ಅದರ ಗುಲಾಮರಾಗಬಾರದು. ನಾವು ಸ್ವತಃ ಮೊಬೈಲ್ ತ್ಯಜಿಸಿ ಮಕ್ಕಳಿಗೆ ಆದರ್ಶವಾಗೋಣ ಎಂದು ಸಾಹಿತಿ ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ರಾಯಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇಂಗ್ಲಿಷ್ ಮಾಧ್ಯಮ ಪ್ರೀ ಪ್ರೈಮರಿ ಪ್ರೈಮರಿ, ಹೈಸ್ಕೂಲ್ ವಿವಿಧ ವಿಭಾಗಗಳ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಥಣಿ ಪಟ್ಟಣದಲ್ಲಿ ರಾಯಲ್ ಶಿಕ್ಷಣ ಸಂಸ್ಥೆ ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿರುವುದು ಶ್ಲಾಘನೀಯ. ಬಡತನ–ಸಿರಿತನ ತಾತ್ಕಾಲಿಕ. ಸಿರಿತನ ಬಂದಾಗ ಬಡತನದ ಸಂಗತಿ ಮರೆತಿಲ್ಲವೆಂದರೆ, ಅದೇ ಮಾನವೀಯತೆ ಎಂದರು.
ಅಥಣಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ ಮಾತನಾಡಿ, ಶಿಕ್ಷಣ ಸಮಾಜದಲ್ಲಿ ನಮಗೆ ಗೌರವದ ಸ್ಥಾನ ದೊರಕಿಸಿ ಕೊಡುತ್ತದೆ. ಶಿಕ್ಷಣ ಮಕ್ಕಳಲ್ಲಿ ಧೈರ್ಯ, ಆತ್ಮ ವಿಶ್ವಾಸ, ಶಿಸ್ತು ಕಲಿಸುತ್ತದೆ. ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಿ ಆವಾಗ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಥಣಿ ರಾಯಲ್ ಸ್ಕೂಲ್ ಅಧ್ಯಕ್ಷ ಆರ್.ಎಂ.ಡಾಂಗೆ, ಸೋಷಿಯಲ್ ಮೀಡಿಯಾ ಇಂದು ಬಹಳಷ್ಟು ವೇಗವಾಗಿದೆ. ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಪಾಲಕರನ್ನು, ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಶಿಕ್ಷಕರನ್ನು ಸತ್ಕರಿಸಿ ಗೌರವಿಸಲಾಯಿತು. ವಿನೂತನವಾಗಿ ಮಕ್ಕಳೇ ಕಾರ್ಯಕ್ರಮ ನಿರ್ವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಮಕ್ಕಳ ವಿವಿಧ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು
ಉಪಾಧ್ಯಕ್ಷರಾದ ಟಿ.ಆರ್.ಢಾoಗೆ, ಕಾರ್ಯದರ್ಶಿ ಎಸ್.ಎ.ಶಿರಗಾಂವಕರ, ಕಾನೂನು ಸಲಹೆಗಾರ ಎಂ.ಡಿ. ಜಹಂಗೀರ, ಆಡಳಿತಾಧಿಕಾರಿ ಎ.ಎಚ್.ಮುಲ್ಲಾ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸುರೇಶ ಬುರ್ಲಿ, ಪ್ರಾಥಮಿಕ ಶಾಲಾ ಪ್ರಧಾನ ಗುರುಮಾತೆ ಆಸಿಯಾ ಪಟೇಲ್, ಪ್ರಾಥಮಿಕ ಪ್ರೌಢಶಾಲಾ ವಿಭಾಗದ ಗುರುಗಳು, ಗುರುಮಾತೆಯರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.