ADVERTISEMENT

ಅಥಣಿ | ಲಾಕ್‌ಡೌನ್ ‌ಸಂಕಷ್ಟ, ತಿಪ್ಪೆ ಪಾಲಾಗುತ್ತಿರುವ ಪಪ್ಪಾಯಿ ಹಣ್ಣುಗಳು

ಪರಶುರಾಮ ನಂದೇಶ್ವರ
Published 21 ಏಪ್ರಿಲ್ 2020, 19:30 IST
Last Updated 21 ಏಪ್ರಿಲ್ 2020, 19:30 IST
ಮೋಳೆ ಗ್ರಾಮದಲ್ಲಿ ಪಪ್ಪಾಯಿ ಹಣ್ಣು ಬಿದ್ದಿರುವುದನ್ನು ರೈತ ಅಣ್ಣಪ್ಪ ತೋರಿಸಿದರು
ಮೋಳೆ ಗ್ರಾಮದಲ್ಲಿ ಪಪ್ಪಾಯಿ ಹಣ್ಣು ಬಿದ್ದಿರುವುದನ್ನು ರೈತ ಅಣ್ಣಪ್ಪ ತೋರಿಸಿದರು   

ಅಥಣಿ (ಬೆಳಗಾವಿ ಜಿಲ್ಲೆ): ಲಾಕ್‌ಡೌನ್‌ನಿಂದಾಗಿ ಪಪ್ಪಾಯಿಗೆ ಬೇಡಿಕೆ ಕುಸಿದಿರುವುದರಿಂದ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ನೂರಾರು ರೈತರು ಪಪ್ಪಾಯಿ ಬೆಳೆದಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ಮೊದಲಾದ ಕಡೆಗಳಲ್ಲಿ ಈ ಹಣ್ಣುಗಳಿಗೆ ಬೇಡಿಕೆ ಇರುತ್ತಿತ್ತು. ಆದರೆ, ಕೊರೊನಾ ವೈರಾಣು ಹರಡುವ ಭೀತಿ ಹಾಗೂ ಲಾಕ್‌ಡೌನ್‌ನಿಂದಾಗಿ ಸಾಗಣೆ ನಿಂತಿದೆ. ಪರಿಣಾಮ, ರೈತರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಕಾಯಿಗಳು ಹಣ್ಣಾಗಿ ಗಿಡದಲ್ಲೇ ಕೊಳೆಯುತ್ತಿರುವುದು ಅಥವಾ ಉದುರಿ ಬೀಳುತ್ತಿದ್ದು, ತಿಪ್ಪೆ ಪಾಲಾಗುತ್ತಿವೆ.

ತಾಲ್ಲೂಕಿನ ಶಿರಹಟ್ಟಿಯ ರೈತ ಮಹಾದೇವ ಕುಂಚನೂರ ಒಂದು ಎಕರೆಯಲ್ಲಿ 1,200 ಗಿಡಗಳನ್ನು ಹಾಕಿದ್ದರು. ಮಾರುಕಟ್ಟೆ ಇಲ್ಲದೆ, ಸಾಗಾಟ ಸಾಧ್ಯವಾಗದೆ ಇರುವುದರಿಂದ ಹಣ್ಣುಗಳನ್ನು ತಿಪ್ಪೆಗೆ ಹಾಕುತ್ತಿದ್ದಾರೆ. ಹಣ್ಣುಗಳು ಕೊಳೆತು ಬೀಳುತ್ತಿರುವುದರಿಂದ ತೋಟದಲ್ಲಿ ದುರ್ವಾಸನೆ ಉಂಟಾಗುತ್ತಿದೆ ಹಾಗೂ ಕೀಟಗಳು ಕಂಡುಬರುತ್ತಿವೆ. ಈ ಸಮಸ್ಯೆ ನಿರ್ವಹಣೆಗೆ ಅವರು ಹರಸಾಹಸ ಪಡುತ್ತಿದ್ದಾರೆ. ₹ 2 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿಸುತ್ತಾರೆ.

ADVERTISEMENT

ಮೋಳೆ ಗ್ರಾಮದ ಅಣ್ಣಪ್ಪ ತುಗಶೆಟ್ಟಿ 2 ಎಕರೆಯಲ್ಲಿ ₹ 4 ಲಕ್ಷ ವೆಚ್ಚ ಮಾಡಿ ಪಪ್ಪಾಯಿ ಬೆಳೆದಿದ್ದರು. ತಮಿಳುನಾಡಿನಿಂದ ಸಸಿಗಳನ್ನು ತಂದು ಬೆಳೆಸಿದ್ದರು. ಬಲಿತ ಕಾಯಿಗಳನ್ನು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಬಂತು. ಹೀಗಾಗಿ, ಅವುಗಳನ್ನು ಗಿಡಗಳಲ್ಲೇ ಬಿಟ್ಟಿದ್ದಾರೆ. ಅವುಗಳು ಕೊಳೆತು ನಾರುತ್ತಿವೆ.

‘ಪಪ್ಪಾಯಿಗೆ ಬೇಡಿಕೆ ಇಲ್ಲದೆ ಇರುವುದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ರೈತ ಮಹಾದೇವ ಕುಂಚನೂರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.