ADVERTISEMENT

ಬೆಳಗಾವಿ|ಎಂಇಎಸ್ ಮುಖಂಡನ ಜತೆ ಪೊಲೀಸ್ ಇನ್‌ಸ್ಪೆಕ್ಟರ್ ಸೆಲ್ಫಿ: ಕನ್ನಡಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:22 IST
Last Updated 1 ನವೆಂಬರ್ 2025, 7:22 IST
   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡ ಶುಭಂ ಶೆಳಕೆ ಜತೆಗೆ ಮಾಳಮಾರುತಿ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಕ್ಲಿಕ್ಕಿಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕನ್ನಡಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಅನುಮತಿ ಇಲ್ಲದಿದ್ದರೂ, ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧ ಎಂಇಎಸ್ ನವರು ಕರಾಳ ದಿನ ಆಚರಿಸುತ್ತಿದ್ದಾರೆ.

ಈ ಮಧ್ಯೆ, ಮೆರವಣಿಗೆ ಆರಂಭಕ್ಕೂ ಮುನ್ನ ಸಂಭಾಜಿ ಉದ್ಯಾನದಲ್ಲಿ ಶೆಳಕೆ ಜತೆಗೆ ಕಾಲಿಮಿರ್ಚಿ ಸೆಲ್ಫಿ ಕ್ಲಿಕ್ಕಿಸಿಕೊಂಡ ನಡೆ ಟೀಕೆಗೆ ಗುರಿಯಾಗಿದೆ.

ADVERTISEMENT

ಭಾಷಾ ಸಾಮರಸ್ಯ ಕದಡುವುದು, ಶಾಂತಿಗೆ ಭಂಗ ತರುವುದು ಸೇರಿದಂತೆ 15ಕ್ಕೂ ಅಧಿಕ ಪ್ರಕರಣಗಳು ಶುಭಂ ಶೆಳಕೆ ಮೇಲಿವೆ.

ಅಭಿಮಾನದ ಸೆಲ್ಫಿ ಅಲ್ಲ:

'ಕರಾಳ‌ ದಿನಾಚರಣೆಯಲ್ಲಿ ಭಾಗಿಯಾಗದಂತೆ ಶುಭಂ ಶೆಳಕೆಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡಲಾಗಿತ್ತು‌. ರಾಜ್ಯೋತ್ಸವ ವೇಳೆ ಪ್ರಚೋದನಾತ್ಮಕ ಹೇಳಿಕೆ ನೀಡದಂತೆ ತಿಳಿಸಲಾಗಿತ್ತು. ನಿನ್ನೆ ಶುಕ್ರವಾರ ರಾತ್ರಿವರೆಗೂ ಆತ ಮಹಾರಾಷ್ಟ್ರದಲ್ಲಿದ್ದ. ಶನಿವಾರ ಬೆಳಿಗ್ಗೆ ಆತನ ಮನೆಗೆ ಹೋಗಿ ನೋಡಿದಾಗಲೂ ಸಹ ಇರಲಿಲ್ಲ. ಆತನ ನಿವಾಸ ನಮ್ಮ ಠಾಣೆ ವ್ಯಾಪ್ತಿಯಲ್ಲಿ ಇರುವ ಕಾರಣ, ಆತನ ಮೇಲೆ ಕಣ್ಗಾವಲು ಇರಿಸಲು ಮೇಲಧಿಕಾರಿಗಳ ಸೂಚನೆ ಇತ್ತು. ಹಾಗಾಗಿ ಸಂಭಾಜಿ ಉದ್ಯಾನಕ್ಕೆ ಬಂದಾಗ ಮೇಲಧಿಕಾರಿಗಳಿಗೆ ವರದಿ ಮಾಡಲು ದಾಖಲಾತಿಗಾಗಿ ಫೋಟೊ ಕ್ಲಿಕ್ಕಿಸಿಕೊಂಡಿದ್ದೇನೆಯೇ ಹೊರತು, ಅಭಿಮಾನಕ್ಕಾಗಿ ಅಲ್ಲ' ಎಂದು ಪಿಐ ಜೆ.ಎಂ.ಕಾಲಿಮಿರ್ಚಿ 'ಪ್ರಜಾವಾಣಿ'ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.