
ಬೀರದೇವರ ಮೂರ್ತಿ
ಮುನವಳ್ಳಿ: ಧೂಪದಾಳ ಮತ್ತು ಕಾಗಿಹಾಳ ತಾಂಡೆ ಗ್ರಾಮಗಳ ದೇವಸ್ಥಾನಗಳಲ್ಲಿ ಕಳ್ಳರು ನುಗ್ಗಿ ಚಿನ್ನ, ಬೆಳ್ಳಿ, ದೇವರ ಆಭರಣಗಳು ಮತ್ತು ಕಾಣಿಕೆ ಪೆಟ್ಟಿಗೆ ದೋಚಿದ ಘಟನೆ ಮಂಗಳವಾರ ಬೆಳಿಗ್ಗೆ ಗೊತ್ತಾಗಿದೆ.
ಧೂಪದಾಳ ಗ್ರಾಮದ ಬೀರದೇವರ ದೇವಸ್ಥಾನದಲ್ಲಿ ಅರ್ಧ ತೊಲಿ ಚಿನ್ನ, 850 ಗ್ರಾಂ ಬೆಳ್ಳಿ (ಕುದುರೆ)ಆಭರಣಗಳು ಕಳವಾಗಿವೆ. ಬೀರದೇವರ ಮೂರ್ತಿಯನ್ನು ಸುಮಾರು ಅರ್ಧಕಿಲೋ ಮೀಟರ್ ದೂರದ ಹೊಲದಲ್ಲಿ ಎಸೆಯಲಾಗಿದೆ.
ಕಾಗಿಹಾಳ ತಾಂಡೆದ ಬಂಡೆಮ್ಮದೇವಿ ದೇವಸ್ಥಾನದಲ್ಲಿ 4 ತೊಲಿ ಚಿನ್ನದ ಆಭರಣ ಮತ್ತು 1 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಬಂಡೆಮ್ಮದೇವಿಯ ದೇವಸ್ಥಾನದ ಕಾಣಿಕೆ ಪೆಟ್ಟಿಗೆಲ್ಲಿದ್ದ ನಗದು ಕಳವಾಗಿವೆ.
ದೇವಸ್ಥಾನದ ಪೂಜಾರಿಗಳು ಬೆಳಿಗ್ಗೆ ದೇವಸ್ಥಾನದ ಬೀಗ ತೆಗೆಯಲು ಬಂದಾಗ ಕಳವಾದ ಘಟನೆ ಬೆಳಕಿಗೆ ಬಂದಿವೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ದೇವಸ್ಥಾನದ ಎದುರು ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡರು. ಮಾಹಿತಿ ಲಭ್ಯವಾದ ನಂತರ ಸವದತ್ತಿಯ ಪೋಲೀಸ್ ಠಾಣೆಯ ಕ್ರೈಂ ಪಿಎಸ್ಐ ಲಕ್ಷ್ಮಣ ಗೌಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಸುತ್ತಮುತ್ತಲಿನ ಪ್ರದೇಶದಲ್ಲಿ ತಾಂತ್ರಿಕ ಸುಳಿವಿನ ಆಧಾರದ ಮೇಲೆ ತನಿಖೆ ಪ್ರಾರಂಬಿಸಿದ್ದಾರೆ. ಸವದತ್ತಿ ಪೋಲೀಸ್ ಠಾಣೆಯಲ್ಲಿ ಎರಡು ದೇವಸ್ಥಾನದ ಹಿರಿಯರಿಂದ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.