ಬೆಳಗಾವಿಯಲ್ಲಿ ಶುಕ್ರವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಬಿ.ಬಿ.ಚಿಮ್ಮನಕಟ್ಟಿ, ಸಿ.ಸಿ.ಪಾಟೀಲ ಇತರರಿದ್ದರು
ಬೆಳಗಾವಿ: ‘ರೈತರ ಅನುಕೂಲಕ್ಕಾಗಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಿಂದ ನಾಲ್ಕು ಕಾಲುವೆಗಳಿಗೆ ಸೋಮವಾರ ಸಂಜೆಯಿಂದಲೇ ನೀರು ಬಿಡುಗಡೆಗೊಳಿಸಬೇಕು’ ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆದೇಶಿಸಿದರು.
ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಶುಕ್ರವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಬೆಳೆಗಳ ರಕ್ಷಣೆಗಾಗಿ ಕಾಲುವೆಗಳಿಗೆ ನೀರು ಬಿಡುವಂತೆ ರೈತರು ಕೋರಿದ್ದರು. ಹಾಗಾಗಿ ಸಲಹಾ ಸಮಿತಿ ಸಭೆ ನಡೆಸಿ, ಬಲದಂಡೆ ಕಾಲುವೆ, ಎಡದಂಡೆ ಕಾಲುವೆ, ನರಗುಂದ ಶಾಖೆ ಕಾಲುವೆ ಮತ್ತು ಕೊಳಚಿ ಕಾಲುವೆಗೆ ಮುಂದಿನ 15 ದಿನಗಳವರೆಗೆ ನೀರು ಬಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಮಗೆ ರೈತರ ಹಿತ ಮುಖ್ಯ’ ಎಂದರು.
ಶಾಸಕ ಸಿ.ಸಿ.ಪಾಟೀಲ, ‘ಕಾಲುವೆಗಳಿಗೆ ನೀರು ಬಿಡುವ ನಿಟ್ಟಿನಲ್ಲಿ ಕೈಗೊಂಡ ತೀರ್ಮಾನದಿಂದ ರೈತರಿಗೆ ಅನುಕೂಲವಾಗಲಿದೆ’ ಎಂದರು.
ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಪ್ರಭಾರ ಪ್ರಾದೇಶಕ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಅಧೀಕ್ಷಕ ಎಂಜಿನಿಯರ್ ಲಕ್ಷ್ಮಣ ನಾಯಕ, ನವಿಲುತೀರ್ಥ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ವಿವೇಕ ಮುದಿಗೌಡರ ಇತರರಿದ್ದರು.
‘ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ಕೃಪೆಯಿಂದ ಮುಂದೆಯೂ ಉತ್ತಮ ಮಳೆಯಾಗಲಿದೆ ಎಂದು ಆಶಿಸುತ್ತೇವೆ. ನೀರಾವರಿಗಾಗಿ ಮೀಸಲಿರುವ 4.5 ಟಿಎಂಸಿ ಅಡಿ ನೀರನ್ನು ಕಾಲುವೆಗಳ ಅಂತ್ಯದವರೆಗೆ ಹರಿಸುತ್ತೇವೆ. ಬೆಳೆಗಳ ರಕ್ಷಣೆಗಾಗಿ ನೀರು ಲಭ್ಯವಿಲ್ಲ ಎಂದು ಯಾರೂ ಆತಂಕಪಡಬೇಕಿಲ್ಲ’ ಎಂದು ಹೆಬ್ಬಾಳಕರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.