ಬೆಳಗಾವಿ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಎನ್ಡಬ್ಲ್ಯುಕೆಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 9ನೇ ದಿನವಾದ ಗುರುವಾರವೂ ಮುಂದುವರಿಯಿತು.
ಮತ್ತೊಂದೆಡೆ, ಸರ್ಕಾರದ ಕಠಿಣ ಕ್ರಮಕ್ಕೆ ಹೆದರಿ ಕರ್ತವ್ಯಕ್ಕೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಗುರುವಾರ 436 ನಿರ್ವಾಹಕರು ಮತ್ತು ಚಾಲಕರು ಕೆಲಸಕ್ಕೆ ಬಂದರು. ಬೆಳಗಾವಿ ವಿಭಾಗದಲ್ಲಿ 58 ಮತ್ತು ಚಿಕ್ಕೋಡಿ ವಿಭಾಗದಲ್ಲಿ 160 ಸೇರಿ 218 ಬಸ್ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿವೆ.
ಇದರೊಂದಿಗೆ, ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಕೂಡ ಕಾರ್ಯಾಚರಣೆ ನಡೆಸಿದವು.
ಸಾರಿಗೆ ನೌಕರರು ಹಾಗೂ ಕುಟುಂಬದ ಕೆಲವರು ಗುರುವಾರ ಸಂಜೆ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದರು. ನಮ್ಮ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವೇತನ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ಅಧ್ಯಕ್ಷ ಮಹೇಶ್ ಶೀಗಿಹಳ್ಳಿ, ರವಿ ವನ್ನೂರ, ಟಿ.ಎಚ್. ಸನದಿ, ಬಸವರಾಜ ಬಿರಾದಾರ, ಬಿ.ಎಚ್. ಚಿಕ್ಕೋಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.