ಮೂಡಲಗಿ ತಾಲ್ಲೂಕಿನ ಲಕ್ಷ್ಮೇಶ್ವರ ಬಳಿ ಕೊಲೆ ನಡೆದ ಸ್ಥಳಕ್ಕೆ ಸಿಪಿಐ ಶ್ರೀಶೈಲ ಬ್ಯಾಕೂಡ ಭೇಟಿ ನೀಡಿ ಪರಿಶೀಲಿಸಿದರು
ಮೂಡಲಗಿ: ತಾಲ್ಲೂಕಿನ ಲಕ್ಷ್ಮೇಶ್ವರ ಕ್ರಾಸ್ ಬಳಿ ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಯುವಕನೊಬ್ಬನ ಕೊಲೆ ಮಾಡಲಾಗಿದೆ.
ಲಕ್ಷ್ಮೇಶ್ವರದ ಮೌಲಾಸಾಬ್ ಯಾಸೀನ್ ಮೋಮಿನ್(22) ಮೃತರು.
‘ತನ್ನ ಪತ್ನಿ ಶಿಲ್ಪಾ ಅವರೊಂದಿಗೆ ಮೌಲಾಸಾಬ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿ, ಸುಣಧೋಳಿಯ ಅಮೋಘ ಢವಳೇಶ್ವರ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೌಲಾಸಾಬ್ ಹಾಗೂ ಶಿಲ್ಪಾ ಬೈಕ್ ಮೇಲೆ ಹೊರಟಿದ್ದರು. ಅವರನ್ನು ತಡೆದ ಆರೋಪಿ, ಮಾರಕಾಸ್ತ್ರದಿಂದ ಇಬ್ಬರ ಮೇಲೂ ಹಲ್ಲೆ ಮಾಡಿದ. ಮೌಲಾಸಾಬ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡ ಶಿಲ್ಪಾ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿವೈಎಸ್ಪಿ ಡಿ.ಎಚ್.ಮುಲ್ಲಾ, ಸಿಪಿಐ ಶ್ರೀಶೈಲ ಬ್ಯಾಕೂಡ ಭೇಟಿ ನೀಡಿ ಪರಿಶೀಲಿಸಿದರು.
ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.