ಮೂಡಲಗಿ: ಇಂಧನ ಬೆಲೆ ಏರಿಕೆ ಖಂಡಿಸಿ ಹಾಗೂ ಕೋವಿಡ್ನಿಂದ ಮೃತಪಟ್ಟವರಿಗೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಅರಭಾವಿ ಮತಕ್ಷೇತ್ರ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮತ್ತು ರಾಜ್ಯ ಉಪಾಧ್ಯಕ್ಷ ಪ್ರಕಾಶ ಸೋನವಾಲಕರ ಮತ್ತು ಮುಖಂಡ ಪ್ರಕಾಶ ಭಾಗೋಜಿ ಮಾತನಾಡಿ, ಬಿಪಿಎಲ್ ಜೊತೆಗೆ ಎಪಿಎಲ್ ಕಾರ್ಡ್ ಹೊಂದಿದವರಿಗೂ ಕೋವಿಡ್ ಪರಿಹಾರವನ್ನು ನೀಡಬೇಕು. ಕೋವಿಡ್ ಲಾಕ್ಡೌನ್ ಕಾರಣ ಬೆಳೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದು, ಪ್ರತಿ ರೈತ ಕುಟುಂಬಕ್ಕೆ ಕೋವಿಡ್ ಪರಿಹಾರ ಎಂದು ₹10 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ಡಿಸೇಲ್, ಪೆಟ್ರೋಲ್, ಗ್ಯಾಸ್ ಸಿಲೆಂಡರ್ ದರ ಮತ್ತು ದಿನಸಿ ದರಗಳನ್ನು ಕೂಡಲೇ ಕಡಿಮೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಅರಭಾವಿ ಬ್ಲಾಕ್ ಅಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿ, ಕೋವಿಡ್ನಿಂದ ನಿಧನರಾದವರಿಗೆ ಆಸ್ಪತ್ರೆಯಲ್ಲಿ ಕೋವಿಡ್ ನಿಧನ ಪ್ರಮಾಣಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಅಂಥಹ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಡಿ.ಜಿ. ಮಹಾತ ಮನವಿ ಸ್ವೀಕರಿಸಿದರು.
ಮುಖಂಡರಾದ ಶ್ರೀಕಾಂತ ಪರುಶೆಟ್ಟಿ, ಚನ್ನಪ್ಪ ಅಥಣಿ, ಶಿವಲಿಂಗ ಹೊಸತೋಟ, ಮಲ್ಲಪ್ಪ ಮದಗುಣಕಿ, ಮಲ್ಲಪ್ಪ ತೇರದಾಳ, ಸಂಗಪ್ಪ ಕಳ್ಳಿಗುದ್ದಿ, ಪುರಸಭೆ ಉಪಾಧ್ಯಕ್ಷ ರೇಣುಕಾ ಹಾದಿಮನಿ, ಸದಸ್ಯರಾದ ಆದಮ್ ತಾಂಬೋಳಿ, ಶಿವು ಸಣ್ಣಕ್ಕಿ, ಸತ್ಯವ್ವ ಅರಮನಿ, ಕಾಶವ್ವ ಝಂಡೇಕುರಬರ, ಚೇತನ ಹೊಸಕೋಟಿ, ಇರ್ಶಾದ ಇನಾಮದಾರ, ಮೋಶಿನ ಪಿರಜಾದೆ, ಚಿನ್ನಪ್ಪ ಝಂಡೇಕುರಬರ, ಸಿದ್ದಪ್ಪ ತುರಬಿ, ಬಸಪ್ಪ ನೇಮಗೌಡರ, ಪಾರೀಸ್ ಉಪ್ಪಿನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.