
ಚಿಕ್ಕೋಡಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಸಂಸತ್ ಕಲಾಪ ವೀಕ್ಷಣೆಗೆ ಸ್ವಂತ ಖರ್ಚಿನಿಂದ ವಿಮಾನದ ಮೂಲಕ ಕರೆದುಕೊಂಡು ಹೋಗಿ ಸೋಮವಾರ, ಮಂಗಳವಾರ ಸಂಸತ್ ಕಲಾಪ ಹಾಗೂ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಿಸಿದರು.
2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಾದ ಕೋಮಲ ರಾಜೇಂದ್ರ ಹವಾಲ್ದಾರ, ದಾನೇಶ್ವರಿ ರುದ್ರಪ್ಪ ಚೌಗಲಾ, ಸ್ನೇಹಾ ಸಿದ್ದಪ್ಪ ಪೂಜೇರಿ, ಸೃಷ್ಠಿ ವಿಠ್ಠಲ ಪಡೋಲ್ಕರ, ಅಮೃತ ಪ್ರಕಾಶ ತೆರಣಿ, ವಿಶಾಲಾಕ್ಷಿ ಪ್ರಹ್ಲಾದ ಶೇಲಾರ, ರೂಪಾ ಬಸವರಾಜ ಹಡಗಿನಾಳ, ನಿರ್ಮಿತಾ ಮಂಜುನಾಥ ಸವದತ್ತಿ, ರೇವತಿ ಮಾದರ, ಸೃಷ್ಠಿ ಬಾಬಾಸಾಹೇಬ ಅಕ್ಕಿವಾಟೆ, ಸಂಜನಾ ಭರತೇಶ ಪಾಟೀಲ, ಐಶ್ವರ್ಯ ಬಸಗೌಡ ಪಾಟೀಲ, ಕಾವೇರಿ ಪಿ ಮಲ್ಲಾಪೂರೆ ಅವರು ಸಂಸತ್ ಕಲಾಪ ಹಾಗೂ ದೆಹಲಿಯ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಖುಷಿ ಪಟ್ಟರು.
’ತಾನು ಎಂದೂ ವಿಮಾನ ಹತ್ತಿದವಳಲ್ಲ, ಸಮೀಪದಿಂದ ನೋಡಿರಲೂ ಇಲ್ಲ. ಪ್ರಿಯಾಂಕಾ ಜಾರಕಿಹೊಳಿ ಅವರಿಂದಾಗಿ ವಿಮಾನದ ಮೂಲಕ ದೆಹಲಿಗೆ ಬಂದ ಖುಷಿ ಇದೆ’ ಎಂದು ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಮಲ್ಲಾಪೂರೆ ಪ್ರಜಾವಾಣಿಗೆ ತಿಳಿಸಿದರು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರಜಾವಾಣಿಯೊಂದಿಗೆ ಮಾತನಾಡಿ, ’ಹೆಚ್ಚು ಅಂಕ ಪಡೆದ ತನ್ನ ಕ್ಷೇತ್ರದ ವಿದ್ಯಾರ್ಥಿನಿಯರೊಂದಿಗೆ ದೆಹಲಿಗೆ ಈ ಭಾರಿಯ ಭೇಟಿಯು ಎಂದೂ ಮರೆಯಲಾರದ ಕ್ಷಣವಾಗಿದೆ’ ಎಂದು ಹೆಮ್ಮೆ ಪಟ್ಟರು.
15 ವಿದ್ಯಾರ್ಥಿಗಳ ತಂಡದೊಂದಿಗೆ ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಸತೀಶ ಬಿರಾದಾರ ಮತ್ತು ರಾಮಕೃಷ್ಣ ಪಾನಬುಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.