ಐಶ್ವರ್ಯಾಗೌಡ
ಬೆಂಗಳೂರು: ಚಿನ್ನಾಭರಣ ಪಡೆದು ಹಣ ನೀಡದೇ ವಂಚಿಸಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿನಗರ ನಿವಾಸಿ ಐಶ್ವರ್ಯಾ ಗೌಡ ಮತ್ತು ಹರೀಶ್ ದಂಪತಿಯ ಮನೆಯಲ್ಲಿ 29 ಕೆ.ಜಿ. ಬೆಳ್ಳಿ ಸಾಮಗ್ರಿ ಹಾಗೂ 100 ಗ್ರಾಂ. ಚಿನ್ನಾಭರಣ ಪತ್ತೆಯಾಗಿವೆ.
ವಂಚನೆ, ಮೋಸ, ನಂಬಿಕೆ ದ್ರೋಹ ಹಾಗೂ ಜೀವ ಬೆದರಿಕೆ ಆರೋಪದಡಿ ಐಶ್ವರ್ಯಾಗೌಡ ಹಾಗೂ ಅವರ ಪತಿ ಹರೀಶ್ ವಿರುದ್ಧ ಚಂದ್ರಾ ಲೇಔಟ್ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಐಶ್ವರ್ಯಾಗೌಡ ಅವರ ಮನೆಯ ಮೇಲೆ ಪೊಲೀಸರು ಬುಧವಾರ ಬೆಳಿಗ್ಗೆ 11ರ ಸುಮಾರಿಗೆ ದಾಳಿ ನಡೆಸಿ ಶೋಧಿಸಿದರು. ಸತತ ಆರು ಗಂಟೆ ಶೋಧ ನಡೆಸಿದ್ದಾರೆ ಎಂದು ಗೊತ್ತಾಗಿದೆ.
‘ಸ್ನೇಹ ಬೆಳೆಸಿ ₹3.25 ಕೋಟಿ ನಗದು, 450 ಗ್ರಾಂ. ಚಿನ್ನಾಭರಣ ಪಡೆದು ಐಶ್ವರ್ಯಾಗೌಡ ವಂಚಿಸಿದ್ದಾರೆ’ ಎಂದು ಆರೋಪಿಸಿ, ರಾಜರಾಜೇಶ್ವರಿನಗದ ನಿವಾಸಿ ಶಿಲ್ಪಾಗೌಡ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಮನೆ ತಪಾಸಣೆ ನಡೆಸಲಾಯಿತು. ಐಶ್ವರ್ಯಾ ಅವರ ಮನೆಯಲ್ಲಿ ಅಂದಾಜು 29 ಕೆ.ಜಿ ಬೆಳ್ಳಿ ಸಾಮಗ್ರಿ, 100 ಗ್ರಾಂ. ಚಿನ್ನ ಪತ್ತೆಯಾಗಿದ್ದು, ಜಪ್ತಿ ಮಾಡಿಕೊಳ್ಳಲಾಗಿದೆ. ಇವುಗಳ ಮೌಲ್ಯ ಅಂದಾಜಿಸಲಾಗುತ್ತಿದೆ. ಕೆಲವು ದಾಖಲೆಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಉಳಿದ ಚಿನ್ನಾಭರಣಗಳನ್ನು ಬೇರೆಡೆ ಸಾಗಿಸಿರುವ ಸಾಧ್ಯತೆಯಿದ್ದು, ಬೇರೆ ಸ್ಥಳಗಳಲ್ಲೂ ತಪಾಸಣೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದೂರುದಾರೆ ಶಿಲ್ಪಾ ಅವರಿಗೂ ನೋಟಿಸ್ ನೀಡಲಾಗಿದ್ದು, ಪ್ರಕರಣದ ಸಂಬಂಧ ದಾಖಲೆಗಳು ಹಾಗೂ ಇನ್ನಷ್ಟು ಮಾಹಿತಿ ನೀಡುವಂತೆ ಕೋರಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸ್ನೇಹಿತರಿಂದ ಹಣ ಪಡೆದು ಸುಮಾರು ₹65 ಲಕ್ಷ ನಗದು ನೀಡಿದ್ದೆ. ಬ್ಯಾಂಕ್ ಖಾತೆಗಳಿಂದ ₹2.60 ಕೋಟಿಯನ್ನು ಸಯೀದಾ ಬಾನು, ಧನು, ಶೀತಲ್, ಚೇತನ್, ಲಕ್ಷ್ಮೀ, ಪ್ರವೀಣ್, ಮಹೇಶ್, ಹರೀಶ್ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೆ. 2022ರ ಜನವರಿಯಿಂದ ಈವರೆಗೆ ಐಶ್ವರ್ಯಾಗೆ ₹3.25 ಕೋಟಿ ಹಣ ನೀಡಿದ್ದೇನೆ’ ಎಂದು ಶಿಲ್ಪಾಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಖಾತೆದಾರರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
‘ಚಿನ್ನಾಭರಣ ಮಳಿಗೆಗಳ ಮಾಲೀಕರು ಹಾಗೂ ಪರಿಚಯಸ್ಥರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಐಶ್ವರ್ಯಾ ದಂಪತಿ ರಾಜಕೀಯ ಮುಖಂಡರ ಚುನಾವಣೆಗೆ ದೊಡ್ಡ ಮೊತ್ತದ ಹಣ ಖರ್ಚು ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕ್ಷೇತ್ರವೊಂದರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ವಿನಿಯೋಗ ಮಾಡಿದ್ದಾರೆ ಎಂಬ ಆರೋಪವಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ದಂಪತಿ ಬಿಡುಗಡೆ
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿ ಮಾಲೀಕರಾದ ವನಿತಾ ಎಸ್.ಐತಾಳ್ ಅವರಿಂದ ₹8.41 ಕೋಟಿ ಸಾಲ ಪಡೆದು ವಂಚಿಸಿದ್ದ ಆರೋಪದ ಅಡಿ ಐಶ್ವರ್ಯಾಗೌಡ ದಂಪತಿಯನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ವಿಚಾರಣೆಗೆ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಆರೋಪಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಆರೋಪಿಗಳ ಬಿಡುಗಡೆಗೆ ಆದೇಶಿಸಿತ್ತು. ಪೊಲೀಸ್ ಕಸ್ಟಡಿಯಿಂದ ಆರೋಪಿಗಳು ಬುಧವಾರ ಬೆಳಿಗ್ಗೆ ಬಿಡುಗಡೆ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.