ದಾಬಸ್ ಪೇಟೆ: ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬುಧವಾರ ಶಿವಗಂಗೆ ಬೆಟ್ಟ ಏರಿದರು. ಬೆಟ್ಟದ ಮೇಲಿಂದ ಪ್ರಕೃತಿ ಸೌಂದರ್ಯವನ್ನು ಸವಿದು, ಬೆಟ್ಟದ ತುತ್ತ ತುದಿಯ ಮೇಲೆ ಭಕ್ತರೊಂದಿಗೆ ಭಜನೆ ಮಾಡಿದರು.
‘ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನ’ದ ವತಿಯಿಂದ ಬುಧವಾರ ದಿವ್ಯ ದರ್ಶನ ಯಾತ್ರೆ ಹಾಗೂ ಗಿರಿ ನಡಿಗೆ ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿವಗಂಗೆಯ ಹಿಪ್ಪೆವನದಿಂದ (ಪ್ರವಾಸಿ ಮಂದಿರದ ಪಕ್ಕ) ಬೆಳಗ್ಗೆ 7 ಗಂಟೆಗೆ ‘ಗಿರಿ ನಡಿಗೆ’ ಆರಂಭವಾಯಿತು. ಬೆಟ್ಟದ ಹೆಬ್ಬಾಗಿಲಿನಿಂದ, ಸುಮಾರು 4 ಸಾವಿರ ಅಡಿಗಳ ಎತ್ತರದ ಬೆಟ್ಟದ ತುತ್ತತುದಿಯವರೆಗೆ ಸ್ವಾಮೀಜಿ ಜೊತೆ ಹಲವಾರು ಮಠಾಧೀಶರು, ಬಿಜೆಎಸ್ ಸಮೂಹ ಶಿಕ್ಷಣ ಸಂಸ್ಥೆಯ 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು, ಭಕ್ತರು ಪಾಲುದಾರರಾದರು.
ಬೆಟ್ಟದ ತುದಿಯ ತೀರ್ಥ ಕಂಬದ ಬಳಿ ಭಜನೆ ನಡೆಸಿದರು. ಸ್ವಾಮೀಜಿ ಹಾರ್ಮೋನಿಯಂ ನುಡಿಸಿದರು. ಭಕ್ತಿ ಗೀತೆಗಳನ್ನು ಹಾಡಿದರು.
ಒಳಕಲ್ಲು ತೀರ್ಥ, ನಾಟ್ಯರಾಣಿ ಶಾಂತಲಾ ಐಕ್ಯವಾದ ಸ್ಥಳ, ಶ್ರೀ ಹೊನ್ನಾದೇವಿ ಸಮೇತ ಗಂಗಾಧರೇಶ್ವರ ಸ್ವಾಮಿ ದೇವಾಲಯ, ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಹಜಾರ ಇನ್ನಿತರ ಸ್ಥಳಗಳನ್ನು ವೀಕ್ಷಿಸಿದರು.
‘ಭಕ್ತರ ಜೊತೆ ಆಧ್ಯಾತ್ಮಿಕ ಪಾದಯಾತ್ರೆ ಮಾಡಬೇಕೆಂಬ ಬಯಕೆಯಿತ್ತು. ಅದು ಇಂದು ಈಡೇರಿದೆ. ಶಿವಗಂಗೆಯಲ್ಲಿ ಶಾಖಾ ಮಠ ಆರಂಭಿಸಬೇಕು ಎನ್ನುವುದು ಬಹುದಿನಗಳ ಬಯಕೆ ಆಗಿದೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ರಮಣಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.