
ಬೆಂಗಳೂರು: ರಾಜ್ಯ ಬಜೆಟ್ನಲ್ಲಿ ಅಂಗನವಾಡಿ ನೌಕರರ ತಿಂಗಳ ಗೌರವ ಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘವು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತೆಯರು, ಬೇಡಿಕೆ ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ತಿಂಗಳ ಗೌರವ ಧನ ₹15 ಸಾವಿರಕ್ಕೆ ಹೆಚ್ಚಳ ಹಾಗೂ ನಿವೃತ್ತಿ ಪರಿಹಾರವಾಗಿ ₹2 ಲಕ್ಷ ನೀಡುವುದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಮೂರು ವರ್ಷ ಗತಿಸಿದರೂ ಬೇಡಿಕೆಗಳನ್ನು ಈಡೇರಿಸಿಲ್ಲ. ಮುಂಬರುವ ಬಜೆಟ್ನಲ್ಲಿ ತಿಂಗಳ ಗೌರವ ಧನ ಮತ್ತು ನಿವೃತ್ತಿ ಪರಿಹಾರ ಹಣವನ್ನು ಹೆಚ್ಚಿಸುವುದೂ ಸೇರಿ ನಿವೃತ್ತರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ (ಉಪ ಧನ) ಹಣವನ್ನು ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ‘ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಪ್ರಮಾಣ ಕಡಿಮೆ ಇದ್ದು, ಎಲ್ಲಾ ಪದಾರ್ಥಗಳ ಪ್ರಮಾಣ ಹೆಚ್ಚಿಸಬೇಕು. ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ನೀಡಬಾರದು ಎನ್ನುವ ಇಲಾಖೆಯ ಆದೇಶ ಪಾಲಿಸಲು ಕ್ರಮ ವಹಿಸಬೇಕು. ಪ್ರತಿ ತಿಂಗಳು 5 ರೊಳಗೆ ತಿಂಗಳ ವೇತನ (ಗೌರವ ಧನ) ಪಾವತಿ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಇಂಟರ್ನೆಟ್ ಸಂಪರ್ಕ ಸಹಿತ ಗುಣಮಟ್ಟದ ಮೊಬೈಲ್ ಸೆಟ್ಗಳು, ಶುದ್ಧ ಕುಡಿಯುವ ನೀರು, ಶೌಚಾಲಯ ಸಹಿತ ಇತರ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಉಮಾದೇವಿ ಮಾತನಾಡಿ, ‘ದಶಕಗಳ ಹೋರಾಟದ ಪರಿಣಾಮವಾಗಿ ಕಾರ್ಯಕರ್ತೆಯರ ತಿಂಗಳ ಗೌರವ ಧನ ಗರಿಷ್ಠ₹ 12,500 ಮತ್ತು ಸಹಾಯಕಿಯರ ಗೌರವ ಧನ ₹7,000 ಪಡೆಯುತ್ತಿದ್ದಾರೆ. ಅತ್ಯಲ್ಪ ಗೌರವಧನವು ನೌಕರರ ಕುಟುಂಬ ನಿರ್ವಹಣೆಗೆ ಸಾಕಾಗದೇ, ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿವೆ. ಅಂಗನವಾಡಿ ನೌಕರರನ್ನು ‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರೆಂದು ಘೋಷಿಸಿ, ಸರ್ಕಾರಿ ನೌಕರರ ಸರಿಸಮನಾಗಿ ವೇತನ ನೀಡಬೇಕು. ಇಲ್ಲದಿದ್ದರೆ, ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐಎಲ್ಸಿ) ಶಿಫಾರಸ್ಸಿನಂತೆ ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೇತನ, ಇಪಿಎಫ್, ಇಎಸ್ಐ ಸಹಿತ ಶಾಸನ ಬದ್ಧವಾಗಿ ಇರುವ ಎಲ್ಲಾ ಸೌಕರ್ಯ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ, ವಿ.ಜಿ. ದೇಸಾಯಿ, ಶೋಭಾ ಪಾಟೀಲ್, ನಿಂಗಮ್ಮ ಮಠ, ನಾಗಮಣಿ, ಕಮಲಾ ತೇಲಿ, ರೇಣುಕಾ ಪಾಟೀಲ್, ರಾಧಾ ರೆಡ್ಡಿ, ಶೈಲಜಾ ಪಾಟೀಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.