ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಇನ್ಮುಂದೆ ವಿಶೇಷ ಆಕರ್ಷಣೆಯೊಂದು ಸ್ವಾಗತ ಕೋರಲಿದೆ.
ರೈಲುಗಳಿಗಾಗಿ ಕಾಯುವ ಪ್ರಯಾಣಿಕರನ್ನು ಆಕರ್ಷಿಸುವ ಉದ್ದೇಶದಿಂದ ನಿಲ್ದಾಣದಲ್ಲಿ ಅಮೆಜಾನ್ ನದಿ ಕಲ್ಪನೆಯಡಿ 12 ಅಡಿ ಉದ್ದದ ಸುರಂಗವನ್ನು ನಿರ್ಮಿಸಲಾಗಿದೆ. ಈ ಸುರಂಗದೊಳಗೆ ಮತ್ಸ್ಯಾಗಾರ (ಅಕ್ವೇರಿಯಂ) ರೂಪಿಸಲಾಗಿದೆ. ಸುರಂಗದೊಳಗೆ ಸಾಗುತ್ತಿದ್ದರೆ, ಅಮೆಜಾನ್ ನದಿಯೊಳಗೆ ಸಾಗುತ್ತಿರುವ ಮೀನುಗಳನ್ನು ಪ್ರತ್ಯಕ್ಷ ನೋಡುತ್ತಿರುವಂತೆ ಭಾಸವಾಗುತ್ತದೆ. ಸಾಗರದಲ್ಲಿ ಕಾಣಸಿಗುವ ಮತ್ಸ್ಯಪ್ರಭೇದಗಳು, ಸಮುದ್ರಜೀವಿಗಳ ಮಾದರಿಗಳು ಇಲ್ಲಿ ಇವೆ. ಈ ಸುರಂಗ ಪ್ರವೇಶಕ್ಕೆ ₹25 ಶುಲ್ಕ ನಿಗದಿ ಮಾಡಲಾಗಿದೆ.
ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮವು (ಐಆರ್ಎಸ್ಡಿಸಿ) ₹1.2 ಕೋಟಿ ವೆಚ್ಚದಲ್ಲಿ ಈ ಸುರಂಗವನ್ನು ನಿರ್ಮಿಸಿದೆ.
‘ಕೋವಿಡ್ ಇರುವುದರಿಂದ ಸದ್ಯ ಈ ಸುರಂಗದಲ್ಲಿ ಒಂದು ಬಾರಿಗೆ 25 ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ. ಜನರು ರೈಲಿಗಾಗಿ ಕಾಯುವ ಸಮಯವನ್ನೂ ಸಂತಸದಿಂದ ಕಳೆಯಬೇಕು ಎಂಬ ಉದ್ದೇಶ ನಮ್ಮದು’ ಎಂದು ಐಆರ್ಎಸ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಲೋಹಿಯಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.