ಬೆಂಗಳೂರು:ಬಾಂಗ್ಲಾ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಶೂಬೂಜ್ (30) ಬಂಧಿತ ಆರೋಪಿ. ‘ಈತನೂ ಅತ್ಯಾಚಾರ ಸಂತ್ರಸ್ತೆಯ ಮೇಲೆ ವಿಕೃತಿ ಮೆರೆದಿದ್ದ. ಘಟನೆ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
‘ಆವಲಹಳ್ಳಿ ಸಮೀಪದ ರಾಂಪುರ ಕೆರೆಯ ಬಳಿ ಕಸ ಆಯುವವರ ಶೆಡ್ನಲ್ಲಿ ಶೂಬೂಜ್ ತಂಗಿದ್ದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಆರೋಪಿಯನ್ನು ಬಂಧಿಸಿ ಜೀಪ್ನಲ್ಲಿ ಕರೆತರುತ್ತಿದ್ದಾಗ, ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕೆಂದು ಕೇಳಿಕೊಂಡಿದ್ದ. ಈ ವೇಳೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ’.
‘ಶರಣಾಗುವಂತೆ ಪೊಲೀಸರು ತಿಳಿಸಿದರೂ ಒಪ್ಪದ ಶೂಬೂಜ್, ತಪ್ಪಿಸಿಕೊಳ್ಳಲು ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ. ಇದರಿಂದ ಪಿಎಸ್ಐ ಶಿವರಾಜ್ ಹಾಗೂ ಹೆಡ್ಕಾನ್ಸ್ಟೆಬಲ್ ದೇವೇಂದ್ರ ನಾಯಕ್ ಗಾಯಗೊಂಡರು. ಕೊನೆಗೆ ಪರಾರಿಯಾಗುತ್ತಿದ್ದ ವೇಳೆ ಪಿಎಸ್ಐ ಶಿವರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.