ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿರಾಶ್ರಿತರ ಅನುಕೂಲಕ್ಕಾಗಿ ಆಶ್ರಯ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
‘ನಗರದಲ್ಲಿ ಈಗಾಗಲೇ 10 ಆಶ್ರಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಖ್ಯೆಯನ್ನು 40ಕ್ಕೆ ಏರಿಸುವ ಉದ್ದೇಶವಿದ್ದು, ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ವಲಯವಾರು ನಿರ್ಗತಿಕರ ಆಶ್ರಯ ಕೇಂದ್ರ ಪ್ರಾರಂಭ ಮಾಡಲಾಗಿದೆ. ಅಲ್ಲಿ ಊಟದ ವ್ಯವಸ್ಥೆ, ಮಲಗಲು ಬೇಕಾದ ವ್ಯವಸ್ಥೆ ಇರುತ್ತದೆ’ ಎಂದರು.
ಅವಧಿ ವಿಸ್ತರಣೆ: ‘ನಗರದಲ್ಲಿ ಬುಧವಾರ ನಡೆದ ಲಸಿಕೆ ಮೇಳದಲ್ಲಿ 1.30 ಲಕ್ಷ ಗುರಿಯನ್ನೂ ಮೀರಿ, 1.85 ಲಕ್ಷ ಲಸಿಕೆ ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಶೇ 95ಕ್ಕೂ ಹೆಚ್ಚು ಜನರಿಗೆ ಮೊದಲ ಡೋಸ್ ಲಸಿಕೆ ವಿತರಿಸುವ ಗುರಿ ಇದ್ದು, ಇದಕ್ಕಾಗಿ, ಲಸಿಕಾ ವಿತರಣಾ ಕೇಂದ್ರಗಳ ಕೆಲಸದ ಅವಧಿಯನ್ನು ವಿಸ್ತರಿಸಲಾಗಿದೆ.50 ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಲಸಿಕೆ ನೀಡಲಾಗುತ್ತದೆ. ಜತೆಗೆ, ಕೆಲವು ಕೊಳೆಗೇರಿ ಹಾಗೂ ಹಿಂದುಳಿದ ಬಡಾವಣೆಗಳಲ್ಲಿ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ’ ಎಂದು ಗೌರವ್ ಗುಪ್ತ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.