ಬೆಂಗಳೂರು: ಶ್ರೀನಗರದ ಕಾಳಿದಾಸ ಬಸ್ನಿಲ್ದಾಣದ ಬಳಿ ರಾಜಕಾಲುವೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ಸಂದರ್ಭ ಸಾರುವೆ ಕುಸಿದು ನಾಲ್ವರು ಕಾರ್ಮಿಕರು ಮಂಗಳವಾರ ಗಾಯಗೊಂಡಿದ್ದಾರೆ
ಗಾಯಾಳುಗಳನ್ನು ಮೀರ್ ಖಾಸಿಂ (24), ಆಸಿಬುಲ್ (24), ಶಿವಪ್ರಸಾದ್ (33), ರೆಹಮಾನ್ ಗಾಯಗೊಂಡವರು. ₹ 10 ಕೋಟಿ ವೆಚ್ಚದಲ್ಲಿ ಇಲ್ಲಿ ರಾಜಕಾಲುವೆ ಪಕ್ಕ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿತ್ತು. ಆರ್ಎಂಐ ಇನ್ಫ್ರಾಸ್ಟಕ್ಚರ್ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿತ್ತು. ಕಳಪೆ ಕಾಮಗಾರಿಯೇ ಈ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಹಾಗೂ ಪಶ್ಚಿಮ ವಲಯದ ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಕಾಮಗಾರಿ ನಡೆಸುವಾಗ ಒಮ್ಮೆಲೆ ಹೆಚ್ಚು ಕಾಂಕ್ರೀಟ್ ಸುರಿದಿದ್ದರಿಂದ ಸಾರುವೆ ಕುಸಿದಿದೆ. ಕಾರ್ಮಿಕರಿಗೂ ಗಾಯಗಳಾಗಿವೆ. ಈ ಬಗ್ಗೆ ಬಿಬಿಎಂಪಿಯ ಟಿವಿಸಿಸಿಯಿಂದ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಕಾಮಗಾರಿಗೆ ಬಳಸಿದ ಕಾಂಕ್ರೀಟ್ನ ಮಾದರಿಯ ಗುಣಮಟ್ಟವನ್ನೂ ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದೇನೆ’ ಎಂದುರವಿ ಸುಬ್ರಹ್ಮಣ್ಯ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಸ್ವಲ್ಪ ಪ್ರಮಾಣದಲ್ಲಿ ಕಾಂಕ್ರೀಟ್ ಸುರಿದು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದರೆ ಸಾರುವೆ ಕುಸಿಯುವುದನ್ನು ತಪ್ಪಿಸಬಹುದಿತ್ತು. ಮಳೆಗಾಲ ಆರಂಭವಾಗುವವರೆಗೆ ಕಾಯದೇ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಬೇಕು’ ಎಂದರು.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಎಂ. ಲೋಕೇಶ್, ‘ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನುಳಿದ ಮೂವರು ಪ್ರಥಮ ಚಿಕಿತ್ಸೆ ಪಡೆದು ಮರಳಿದ್ದಾರೆ. ಕಾಮಗಾರಿ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಿದ್ದೇನೆ’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.