
ಬೆಂಗಳೂರು ಏರ್ಪೋರ್ಟ್
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಒತ್ತಡ ತಗ್ಗಿಸಲು, ಸುರಕ್ಷತೆ ಹೆಚ್ಚಿಸಲು, ಶಿಸ್ತು ಜಾರಿಗೆ ತರಲು ಹೆಚ್ಚುವರಿ ಶುಲ್ಕ
ಭರಿಸಲು ನಿರ್ಧರಿಸಿದ್ದು, ಇದು ಡಿಸೆಂಬರ್ 8ರಿಂದ ಜಾರಿಗೆ ಬರಲಿದೆ ಎಂದು ಕೆಐಎಎಲ್ ಸಿಇಒ ಹರಿ ಮರಾರ್ ತಿಳಿಸಿದ್ದಾರೆ.
ಕೆಐಎಎಲ್ ವೇಗವಾಗಿ ಬೆಳೆಯುತ್ತಿರುವ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ನಿತ್ಯ ಅಂದಾಜು 1.30 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ವಿಮಾನ ನಿಲ್ದಾಣ ರಸ್ತೆ ಮಾರ್ಗದಲ್ಲಿ ಸುಮಾರು ಒಂದು ಲಕ್ಷ ವಾಹನಗಳು ನಿತ್ಯ ಸಂಚರಿಸುತ್ತವೆ. ವಿಶೇಷವಾಗಿ ಟರ್ಮಿನಲ್ ಮುಂಭಾ
ಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡಲು ಪ್ರತ್ಯೇಕ ಪಥವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅನುಮತಿಸಿದ ಉಚಿತ ಸಮಯ ಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗು
ವುದು. ಎರಡೂ ಟರ್ಮಿನಲ್ಗಳ ಪಿಕಪ್ ವಲಯದಲ್ಲಿ ಎಲ್ಲ ಖಾಸಗಿ ವಾಹನಗಳು (ಬಿಳಿ ಬೋರ್ಡ್) 8 ನಿಮಿಷ ಉಚಿತವಾಗಿ ಬಳಕೆ ಮಾಡಬಹುದು. ಇದಾದ ಬಳಿಕ ಕಾರುಗಳಿಗೆ 8ರಿಂದ 13 ನಿಮಿಷದವರೆಗೆ ₹150 ಹಾಗೂ 13ರಿಂದ18 ನಿಮಿಷದವರೆಗೆ ₹300 ಶುಲ್ಕ ವಿಧಿಸಲಾಗುತ್ತದೆ. ಅದಕ್ಕಿಂತ ಹೆಚ್ಚು ಸಮಯ ನಿಲ್ಲಿಸಿದರೆ ಸಮೀಪದ ಪೊಲೀಸ್ ಠಾಣೆಗೆ ‘ಟೋ’ ಮಾಡಲಾಗುತ್ತದೆ. ದಂಡದ ಜೊತೆಗೆ ಟೋಯಿಂಗ್ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್ಗಳು ಸೇರಿ ಎಲ್ಲ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಕಾಯಬೇಕು. ಮೊದಲ 10 ನಿಮಿಷ ಉಚಿತವಾಗಿ ಪಾರ್ಕ್ ಮಾಡಬಹುದು. ಟರ್ಮಿನಲ್ ಒಂದಕ್ಕೆ ಬರುವ ವಾಣಿಜ್ಯ ವಾಹನಗಳು ಪಿ4 ಹಾಗೂ ಪಿ3 ಪಾರ್ಕಿಂಗ್ ವಲಯಕ್ಕೆ ತೆರಳಬೇಕು. ಟರ್ಮಿನಲ್–2ಕ್ಕೆ ಬರುವ ವಾಹನಗಳು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕು.
ಬಿಳಿ ಬೋರ್ಡ್ನ ಎಲ್ಲಾ ವಾಹನಗಳನ್ನು ಖಾಸಗಿ ವಾಹನಗಳಾಗಿಯೂ, ಹಳದಿ ಬೋರ್ಡ್, ಇವಿ ವಾಣಿಜ್ಯ ವಾಹನಗಳನ್ನು ವಾಣಿಜ್ಯ ವಾಹನಗಳಾಗಿ ವಿಂಗಡಿಸಲಾಗಿದೆ. ನಿರ್ಗಮನ ಗೇಟ್ನಲ್ಲಿ ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ.
ಬಿಐಎಎಲ್ ಪ್ರಕಾರ ಸುಮಾರು 1 ಲಕ್ಷ ವಾಹನಗಳು ಏರ್ಪೋರ್ಟ್ ರಸ್ತೆಗೆ ಪ್ರವೇಶಿಸುತ್ತಿದೆ. ಇದು ಸ್ಥಳಾವಕಾಶದ ಕೊರತೆ ಕಾರಣವಾಗಿದೆ. ಪ್ರಮುಖವಾಗಿ ಟರ್ಮಿನಲ್ಗಳ ಮುಂಭಾಗದಲ್ಲಿರುವ ಪಿಕ್ಅಪ್ ಹಾಗೂ ಡ್ರಾಪ್ ಪ್ರದೇಶಗಳಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡುತ್ತಿದೆ.
‘ಖಾಸಗಿ ಕಾರುಗಳು ಹಾಗೂ ಕ್ಯಾಬ್ಗಳು ಹೆಚ್ಚು ಸಮಯ ವ್ಯಯಿಸುತ್ತಿರುವುದರಿಂದ ಕೃತಕ ದಟ್ಟಣೆ ಉಂಟಾಗುತ್ತಿದೆ. ಇದು ಸುಗಮ ಸಂಚಾರಕ್ಕೆ ತೊಂದರೆಯುಂಟು ಮಾಡುವುದಲ್ಲದೆ, ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಲು ಹಾಗೂ ಪ್ರಯಾಣಿಕರ ಅನುಭವ ಸುಧಾರಿಸಲು, ಶಿಸ್ತು ಜಾರಿ ಹಾಗೂ ಅನಧಿಕೃತ ಪಾರ್ಕಿಂಗ್ ತಡೆಯಲು ಹಾಗೂ ಸಮಯ ಪೋಲು ತಡೆಯಲು ಲೇನ್ ಪ್ರತ್ಯೇಕತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ಡ್ರಾಪ್ ಹಾಗೂ ಪಿಕ್ಅಪ್ ವಲಯಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪಿಕಪ್ ವಲಯದ ದುರ್ಬಳಕೆಯನ್ನೂ ತಡೆಯುತ್ತದೆ’ ಎಂದು ಬಿಐಎಎಲ್ ಹೇಳಿದೆ.
ಕೆಐಎಎಲ್ನಲ್ಲಿ ಸಂಚಾರ ಒತ್ತಡ ತಗ್ಗಿಸಲು ಡಿ.8ರಿಂದ ಜಾರಿ
ವಿಮಾನ ನಿಲ್ದಾನ ಮಾರ್ಗದಲ್ಲಿ ನಿತ್ಯ 1 ಲಕ್ಷ ವಾಹನ ಸಂಚಾರ
ವಾಹನಗಳಿಗೆ ವಿವಿಧ ರೀತಿಯ ಶುಲ್ಕ ವಿಧಿಸಲು ನಿರ್ಧಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.