ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಭಾವದೊಂದಿಗೆ ಆಚರಿಸಲಾಯಿತು. ಮನೆ ಹಾಗೂ ದೇಗುಲಗಳಲ್ಲಿ ಹಬ್ಬದ ಸಡಗರ ಇಮ್ಮಡಿಗೊಂಡಿತ್ತು.
ಲಕ್ಷ್ಮೀದೇವಿ ಆರಾಧಿಸಿದ ಭಕ್ತರು, ಸಮೃದ್ಧಿ, ಸುಖ–ಶಾಂತಿ ಹಾಗೂ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.
ಲಕ್ಷ್ಮೀದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬಗೆಬಗೆಯ ಪುಷ್ಪಗಳು ಹಾಗೂ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದ ನಡುವೆ ದೇವಿ ಕಂಗೊಳಿಸಿದಳು. ಹೂವು, ಹಣ್ಣುಗಳಿಂದ ಸಂಪತ್ತಿನ ಅಧಿದೇವತೆಯನ್ನು ಆರಾಧಿಸಿದ್ದು ವಿಶೇಷವಾಗಿತ್ತು.
ಲಕ್ಷ್ಮಿ ಕಳಶ ಪ್ರತಿಷ್ಠಾಪಿಸಿ, ಸೀರೆ ಹಾಗೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮನೆಯ ಎದುರಿನ ಅಂಗಳದಲ್ಲೂ ರಂಗೋಲಿಯ ಚಿತ್ತಾರ ಮೂಡಿತ್ತು.
ಮನೆಗೆ ಬಂದ ಮಹಿಳೆಯರಿಗೆ ಅರಿಶಿನ ಕುಂಕುಮ, ಹೂವು ನೀಡಲಾಯಿತು. ಶೇಷಾದ್ರಿಪುರ ಮತ್ತು ಮಹಾಲಕ್ಷ್ಮಿ ಲೇಔಟ್ನ ಲಕ್ಷ್ಮಿ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ದೇವಾಲಯಗಳಲ್ಲಿ ಮಹಿಳಾ ಭಕ್ತರಿಗೆ ಅರಿಶಿನ– ಕುಂಕುಮ ಹಾಗೂ ಹಸಿರು ಬಳೆ ವಿತರಣೆ ಮಾಡಲಾಯಿತು.
ಮಲ್ಲೇಶ್ವರ, ಮಹಾಲಕ್ಷ್ಮಿಲೇಔಟ್, ಜಾಲಹಳ್ಳಿ, ವಿಜಯನಗರ, ಬಸವನಗುಡಿ, ಬನಶಂಕರಿ, ಅಶೋಕನಗರ ಶ್ರೀರಾಮಪುರ, ಕೆಂಗೇರಿ, ಸುಂಕದಕಟ್ಟೆ, ಜೆ.ಪಿ.ನಗರ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಸದಾಶಿವನಗರ, ದೀಪಾಂಜಲಿ ನಗರ, ವಿವಿ ಪುರಂ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಮಡಿವಾಳ, ಇಂದಿರಾನಗರ, ವಿದ್ಯಾರಣ್ಯಪುರ, ಎಚ್ಎಂಟಿ ಲೇಔಟ್, ಸಹಕಾರ ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ, ಸುಬ್ರಹ್ಮಣ್ಯ ನಗರ, ಹೊಸಕೆರೆಹಳ್ಳಿ, ಬ್ಯಾಟರಾಯನಪುರದಲ್ಲಿ ಹಬ್ಬದ ಸಂಭ್ರಮ ಕಂಡುಬಂತು.
ನಗರದ ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿತ್ತು. ನಗರದಲ್ಲಿ ಮಧ್ಯಾಹ್ನದವರೆಗೂ ವಾಹನ ದಟ್ಟಣೆ ಸ್ವಲ್ಪ ಕಡಿಮೆಯಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.