ADVERTISEMENT

ಶೆಡ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಬಿದ್ದು ದುರ್ಘಟನೆ: ಮಗು ಸಾವು, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 9:01 IST
Last Updated 19 ಡಿಸೆಂಬರ್ 2025, 9:01 IST
<div class="paragraphs"><p>ಶೆಡ್‌ ಮೇಲೆ ಬಿದ್ದಿದ್ದ ಸಿಮೆಂಟ್‌ ಇಟ್ಟಿಗೆಗಳು</p></div>

ಶೆಡ್‌ ಮೇಲೆ ಬಿದ್ದಿದ್ದ ಸಿಮೆಂಟ್‌ ಇಟ್ಟಿಗೆಗಳು

   

ಬೆಂಗಳೂರು: ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದು ನಾಲ್ಕು ವರ್ಷದ ಮಗು ಮೃತಪಟ್ಟಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಶ್ರೀಶೈಲ್‌ ಎಂಬುವವರ ಪುತ್ರಿ ಮನುಶ್ರೀ ಅಲಿಯಾಸ್ ಪಾರು ಮೃತ ಮಗು.

ADVERTISEMENT

ಗಾಯಗೊಂಡಿರುವ ಶ್ರೀಯಾನ್‌ (6), ಶೇಖರ್(5) ಹಾಗೂ ಮಮತಾ (30) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್​​ನ ಶೆಡ್‌ನಲ್ಲಿ ವಿಜಯಪುರ ಜಿಲ್ಲೆ ಸಿಂಧಗಿಯ ಕುಟುಂಬವು ವಾಸವಿತ್ತು.

ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಅವರಿಗೆ ಸೇರಿದೆ. 4ನೇ ಮಹಡಿ ಮೇಲಿಂದ ಸುಮಾರು 10ರಿಂದ 12 ಸಿಮೆಂಟ್ ಇಟ್ಟಿಗೆಗಳು ಕೆಳಕ್ಕೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಶೆಡ್‌ನಲ್ಲಿದ್ದ ಮಗು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಶೆಡ್‌ನ ಶೀಟ್‌ ಸಂಪೂರ್ಣ ಧ್ವಂಸವಾಗಿದೆ.

‘ಮಾಲೀಕರು ಯಾವುದೇ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎಂಬುದು ಕಂಡುಬಂದಿದೆ. ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಮಣ್ಣು ಕುಸಿದು ಕಾರ್ಮಿಕ ಸಾವು

ಬೆಂಗಳೂರು: ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪಾರ್ಟ್​ಮೆಂಟ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮಿಳುನಾಡಿನ ಧರ್ಮಪುರಿ ಮೂಲದ ಚಿದಂಬರಂ(45) ಮೃತ ಕಾರ್ಮಿಕ. ದೊಮ್ಮಸಂದ್ರ ಸಮೀಪ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡದ ಗುತ್ತಿಗೆದಾರ ಹಾಗೂ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು. ತಮಿಳುನಾಡಿನ ಚಿದಂಬರಂ ಕೆಲ ವರ್ಷಗಳಿಂದ ದೊಮ್ಮಸಂದ್ರದಲ್ಲಿ ವಾಸವಾಗಿದ್ದು ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ದೊಮ್ಮಸಂದ್ರದ ವರ್ತೂರು ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಒಳಚರಂಡಿ ಕಾಮಗಾರಿಗಾಗಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು.

ಮಂಗಳವಾರ ರಾತ್ರಿಯೂ ಕೆಲಸ ಮಾಡುವಾಗ ಏಕಾಏಕಿ ಮಣ್ಣು ಕುಸಿದು ಚಿದಂಬರಂ ಮೇಲೆ ಬಿದ್ದಿದೆ. ಪರಿಣಾಮ ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಚಿದಂಬರಂ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಯ ಮೇಲೆ ಹರಿದ ಚಕ್ರ: ಯುವಕ ಸಾವು

ಕೆ.ಆರ್.ಪುರ: ಮಹದೇವಪುರ ಸಂಚಾರ ಪೊಲೀಸ್ ವ್ಯಾಪ್ತಿಯ ಕಾಡುಗೋಡಿಯ ರೈಲು ನಿಲ್ದಾಣ ಬಳಿ ಶಾಲಾ ವಾಹನದ ಚಕ್ರ ದಿಚಕ್ರ ವಾಹನ ಸವಾರರ ತಲೆಯ ಮೇಲೆ ಹರಿದು ಮೃತಪಟ್ಟಿದ್ದಾರೆ. ವಂಶಿ (26) ಮೃತ ಯುವಕ. ಕಾಡುಗೋಡಿ ಪಟಾಲಮ್ಮ ಬಡಾವಣೆಯಲ್ಲಿ ನೆಲಸಿರುವ ಚಲಪತಿ ಮತ್ತು ಸುನಂದಾ ದಂಪತಿಯ ಪುತ್ರ ವಂಶಿ ಐಟಿಪಿಎಲ್‌ನ ವಿಡಾಲ್ ಹೆಲ್ತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಕಾಡುಗೋಡಿ ರೈಲ್ವೆ ನಿಲ್ದಾಣ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಗೊರವಿಗೆರೆಯ ಎನ್.ಪಿ.ಎಸ್ ಶಾಲೆಗೆ ಸೇರಿದ ಶಾಲಾ ವಾಹನ ದ್ವಿಚಕ್ರ ವಾಹನಕ್ಕೆ ತಾಗಿತ್ತು.

ಸವಾರ ವಂಶಿ ಅಯತಪ್ಪಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಯುವಕನ ತಲೆ ಮೇಲೆ ಬಸ್ ಹರಿದಿದೆ. ಅವರು ಸ್ಥಳದಲೇ ಮೃತಪಟ್ಟಿದ್ದಾರೆ. ಚಾಲಕ ಶಾಲಾ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.