
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಲಕ್ಕಸಂದ್ರ ಪೇಯಿಂಗ್ ಗೆಸ್ಟ್ (ಪಿ.ಜಿ)ನಲ್ಲಿ ಲ್ಯಾಪ್ಟಾಪ್, ಆ್ಯಪಲ್ ಇಯರ್ ಫೋನ್ ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಇಯರ್ ಫೋನ್ನ ಟ್ರ್ಯಾಕಿಂಗ್ ಸೌಲಭ್ಯ ಬಳಸಿ 11 ತಾಸಿನೊಳಗೆ ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಹೊಸೂರು ಜಿಲ್ಲೆಯ ರಾಮನಗರ ನಿವಾಸಿ ರಾಘವ ಎಂಬಾತ ಶುಕ್ರವಾರ ಬೆಳಿಗ್ಗೆ ಪಿ.ಜಿ ಪ್ರವೇಶಿಸಿ, ಕೊಠಡಿಯಲ್ಲಿದ್ದ ಲ್ಯಾಪ್ಟಾಪ್, ಎರಡು ಮೊಬೈಲ್ ಫೋನ್ಗಳು, ಡಾಂಗಲ್, ಹೆಡ್ಫೋನ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳು ಮತ್ತು ಒಂದು ಆಪಲ್ ಏರ್ಪಾಡ್ ಕಳವು ಮಾಡಿಕೊಂಡು ಪರಾರಿಯಾಗಿದ್ದ.
ಪೇಯಿಂಗ್ ಗೆಸ್ಟ್ನ ಎರಡನೇ ಮಹಡಿಯ ಒಂದೇ ಕೊಠಡಿಯಲ್ಲಿರುವ ಚಂದ್ರಶೇಖರ್ ರೆಡ್ಡಿ, ಕೆ. ಭರತ್, ಹಾಗೂ ಬೆತು ನಾಗಮಣಿಕಾಂತ ಅವರಿಗೆ ಸೇರಿದ ವಸ್ತುಗಳನ್ನು ಕಳವು ಮಾಡಲಾಗಿತ್ತು.
‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಆರೋಪಿ ಪಿ.ಜಿ ಕಟ್ಟಡ ಪ್ರವೇಶಿಸಿ, ಎರಡನೇ ಮಹಡಿಗೆ ತೆರಳಿ ಕೊಠಡಿಯೊಳಗೆ ನುಸುಳಿರುವುದು ಕಾಣಿಸುತ್ತದೆ. ಭರತ್ ಅವರು ತಮ್ಮ ಪಕ್ಕದಲ್ಲೇ ಲ್ಯಾಪ್ಟಾಪ್ ಇಟ್ಟುಕೊಂಡು ನಿದ್ರಿಸುತ್ತಿದ್ದರು. ಆರೋಪಿ ಮೂರು ನಿಮಿಷದೊಳಗೆ ಕಳ್ಳತನ ನಡೆಸಿದ್ದ. ಇಯರ್ ಫೋನ್ನ ಟ್ರ್ಯಾಕಿಂಗ್ ಸೌಲಭ್ಯ ಹಾಗೂ ತಂತ್ರಜ್ಞಾನ ಬಳಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.