
ಬೆಂಗಳೂರು ಎಂ.ಜಿ ರಸ್ತೆಯಲ್ಲೂ ಕಿತ್ತುಹೋದ ಪಾದಚಾರಿ ಮಾರ್ಗ, ಕಸ: ಉದ್ಯಮಿಗಳ ಆಕ್ರೋಶ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ರಸ್ತೆಯಾದ ಮಹಾತ್ಮಾ ಗಾಂಧಿ ರಸ್ತೆಯ (ಎಂಜಿ ರೋಡ್) ಅವ್ಯವಸ್ಥೆ ಬಗ್ಗೆ ಬೆಂಗಳೂರಿನ ಉದ್ಯಮಿ ಮೋಹನ್ದಾಸ್ ಪೈ ಅವರು ಚಿತ್ರವೊಂದನ್ನು ಹಂಚಿಕೊಂಡು ಕಿಡಿಕಾರಿದ್ದಾರೆ.
ಈ ಫೋಟೊ ಸದ್ಯ ಟ್ವಿಟರ್ನಲ್ಲಿ ಹೆಚ್ಚು ಚರ್ಚೆಯಾಗಿದ್ದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂಮ್ದಾರ್ ಶಾ ಸೇರಿದಂತೆ ಅನೇಕರು ಹಂಚಿಕೊಂಡು ಬೆಂಗಳೂರಿನ ಕೆಲ ಅಸಡ್ಡೆ ಮನೋಭಾವದ ನಾಗರಿಕ ವರ್ತನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅತ್ಯಂತ ಪ್ರಮುಖ ರಸ್ತೆಯಾದ ಎಂ.ಜಿ ರಸ್ತೆಯಲ್ಲಿ ಫುಟ್ಪಾತ್ ಹಾಳಾಗಿರುವುದನ್ನು ಮತ್ತು ಕಸವನ್ನು ಹೇಗೆ ಹಾಕಿದಾರೆ ನೋಡಿ. ನಮ್ಮ ಅತ್ಯಂತ ಪ್ರತಿಷ್ಠಿತ ರಸ್ತೆಯಲ್ಲೂ ಉತ್ತಮ ಫುಟ್ಪಾತ್ಗಳನ್ನು ಹೊಂದಲು ಸಾಧ್ಯವಾಗದಿರುವುದು ಎಂತಹ ನಾಚಿಕೆಗೇಡಿನ ಸಂಗತಿ. ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಿರಣ್ ಮಜೂಂಮ್ದಾರ್ ಶಾ ಅವರು, ಕಸದ ಬಗ್ಗೆ ನಾಗರಿಕ ಪ್ರಜ್ಞೆ ಇಲ್ಲದ ಬೇಜವಾಬ್ದಾರಿ ಜನಗಳ ಕೆಲಸವಿದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅನೇಕ ನಾಗರಿಕರು ಈ ಪೋಸ್ಟ್ಗಳಿಗೆ ಪ್ರತಿಕ್ರಿಯಿಸಿದ್ದು, ಪ್ರತಿದಿನ ಸಾವಿರಾರು ಜನ ಅಡ್ಡಾಡುವ ಎಂ.ಜಿ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ ಮಾರ್ಗಗಳು ಮತ್ತು ಅವುಗಳ ನಿರ್ವಹಣೆ ಸರಿಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.