ADVERTISEMENT

‘ಪೊಲೀಸ್ ಓಟ’: ಈ ದಿನದಂದು ವಿಧಾನಸೌಧದ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 20:31 IST
Last Updated 27 ಫೆಬ್ರುವರಿ 2026, 20:31 IST
   

ಬೆಂಗಳೂರು: ನಗರದಲ್ಲಿ ಮಾರ್ಚ್‌ 1ರಂದು ಆಯೋಜಿಸಿರುವ ಮೂರನೇ ಆವೃತ್ತಿಯ ‘ಪೊಲೀಸ್ ಓಟ’ದಲ್ಲಿ(ಕೆಎಸ್‌ಪಿ ರನ್) ಭಾಗವಹಿಸಲು 12 ಸಾವಿರ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಓಟದ ಅಂಗವಾಗಿ ವಿಧಾನಸೌಧದ ಸುತ್ತಮುತ್ತಲ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಅಂದು ಬೆಳಿಗ್ಗೆ 6.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಗೃಹ ಸಚಿವ ಜಿ.ಪರಮೇಶ್ವರ ಓಟಕ್ಕೆ ಚಾಲನೆ ನೀಡುವರು. ವಿಧಾನಸೌಧದಿಂದ ಆರಂಭಗೊಳ್ಳುವ ಓಟ, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ವಿಧಾನಸೌಧದ ಮುಂಭಾಗ ಮುಕ್ತಾಯಗೊಳ್ಳಲಿದೆ.

ಕೆ.ಆರ್‌.ವೃತ್ತ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕಬ್ಬನ್ ಪಾರ್ಕ್ ಒಳಭಾಗ, ಕ್ವೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಕಬ್ಬನ್ ರಸ್ತೆ, ಬಿ.ಆರ್.ವಿ. ಜಂಕ್ಷನ್ ಮಾರ್ಗವಾಗಿ ಸಾಗಿ ಮಣಿಪಾಲ್ ಸೆಂಟರ್ ಹತ್ತಿರ ಯೂಟರ್ನ್ ಪಡೆದು ಸಿಟಿಒ ಜಂಕ್ಷನ್‌ಗೆ ಬಂದು ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧ ತಲುಪಲಿದೆ.

ಓಟದಲ್ಲಿ ಭಾಗವಹಿಸುವವರು ಗೇಟ್ ನಂ.2ರ ಮೂಲಕ ಪ್ರವೇಶಿಸಬೇಕು. ಬೆಳಿಗ್ಗೆ 6 ರಿಂದ 11.30ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ADVERTISEMENT

ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳು ಕೆ.ಆರ್.ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್‌ ಕಡೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.  

ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ಸರ್ಕಲ್ ಕಡೆಗೆ ಹೋಗುವ ವಾಹನಗಳು ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಸಂಚರಿಸಿ ಚಂದ್ರಿಕಾ ಜಂಕ್ಷನ್ ಮೂಲಕ ಸಂಚರಿಸಬೇಕು. ಹಡ್ಸನ್ ಜಂಕ್ಷನ್‌ನಿಂದ ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಮಂಡ್ ವೃತ್ತಕ್ಕೆ ಕಳುಹಿಸಲಾಗುವುದು.

ಮಣಿಪಾಲ್ ವೃತ್ತದಿಂದ ಸಿಟಿಒ ಕಡೆಗೆ ವಾಹನ ಸಂಚಾರ ನಿರ್ಬಂಧಿಸಿ, ಸಿಟಿಒದಿಂದ ಮಣಿಪಾಲ್ ಕಡೆಗೆ ಸಂಚರಿಸುವ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಡ್‌ ಕ್ವಾರ್ಟರ್‌ ಜಂಕ್ಷನ್‌ನಿಂದ ಬರುವ ವಾಹನಗಳು ಇನ್‌ಫೆಂಟ್ರಿ ರಸ್ತೆ ಮೂಲಕ ಸಾಗಿ ಡಿಕನ್‌ಸನ್‌ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆ ಮೂಲಕ ಕಬ್ಬನ್ ರಸ್ತೆ ಪ್ರವೇಶಿಸಬಹುದಾಗಿದೆ.

‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ‘ಹಸಿರು ಬೆಂಗಳೂರು’, ‘ಡ್ರಗ್ಸ್ ಮುಕ್ತ ಕರ್ನಾಟಕ’, ‘ಸೈಬರ್ ಅಪರಾಧ’ ಕುರಿತು ಜಾಗೃತಿ ಮೂಡಿಸಲಾಗುತ್ತದೆ. 10 ಕಿ.ಮೀ. ಓಟದ ಸ್ಪರ್ಧೆ ಅನುಭವಿ ಓಟಗಾರರಿಗೆ ಹಾಗೂ 5 ಕಿ.ಮೀ. ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಬಹುದು. ಎರಡು ವಿಭಾಗಗಳಿಂದ ವಿಜೇತರಿಗೆ ₹18 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಾಹನ ನಿಲುಗಡೆ ಸ್ಥಳಗಳು
  • ಎಂ.ಎಸ್.ಬಿಲ್ಡಿಂಗ್ ಸುತ್ತಮುತ್ತಲಿನ ಪ್ರದೇಶ

  • ಎ.ಜಿ. ಕಚೇರಿಯಿಂದ ಎಂ.ಎಸ್.ಬಿಲ್ಡಿಂಗ್ ವರೆಗೆ

  • ಜ್ಞಾನಜ್ಯೋತಿ ಸಭಾಂಗಣ ಆವರಣ

  • ನೆಹರೂ ಪ್ಲಾನಿಟೋರಿಯಂ ಆವರಣ

  • ಅಂಚೆ ಕಚೇರಿ ರಸ್ತೆ

  • ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮೈದಾನ, ಅರಮನೆ ರಸ್ತೆ

  • ಎಂ.ಎಲ್.ಸಿ.ಪಿ ಪಾರ್ಕಿಂಗ್, ಫ್ರೀಡಂ ಪಾರ್ಕ್ ಹತ್ತಿರ (ಪಾವತಿ ಆಧಾರದ ಮೇಲೆ)

ವಾಹನ ನಿಲುಗಡೆ ನಿರ್ಬಂಧಿತ ಸ್ಥಳ
lಡಾ.ಬಿ.ಆರ್.ಅಂಬೇಡ್ಕರ್‌ ರಸ್ತೆ, ಕೆ.ಬಿ. ರಸ್ತೆ, ನೃಪತುಂಗ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಸ್ಯಾಂಕಿ ರಸ್ತೆ, ಎ.ಜಿ.ಕಚೇರಿಯಿಂದ ಚಾಲುಕ್ಯ ಜಂಕ್ಷನ್‌ವರೆಗೆ, ಮ್ಯೂಸಿಯಂ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.