ಸಂಚಾರ ದಟ್ಟಣೆ (ಸಂಗ್ರಹ ಚಿತ್ರ)
ಬೆಂಗಳೂರು: ಭಾರಿ ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯ ಸ್ಥಿತಿಯಿಂದಾಗಿ ಹೊರ ವರ್ತುಲ ರಸ್ತೆಯ ಕಾಡುಬೀಸನಹಳ್ಳಿಯ ವಸ್ವಾನಿ ಪ್ರೆಸಿಡೊದಿಂದ ಸ್ಥಳಾಂತರಗೊಳ್ಳುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಕಂಪನಿ ‘ಬ್ಲ್ಯಾಕ್ಬಕ್’ (BlackBuck) ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ ರಾಜೇಶ್ ಯಬಾಜಿ, ‘ಹೊರವರ್ತುಲ ರಸ್ತೆಯ ಬೆಳ್ಳಂದೂರು ಕಳೆದ 9 ವರ್ಷಗಳಿಂದ ನಮ್ಮ ಮನೆಯೂ ಕಚೇರಿಯೂ ಆಗಿತ್ತು. ಆದರೆ ಈಗ ಅಲ್ಲಿ ಮುಂದುವರಿಯಲು ಭಾರಿ ಕಷ್ಟವಾಗುತ್ತಿದೆ. ನನ್ನ ಸಹೋದ್ಯೋಗಿಗಳಿಗೆ ಪ್ರಯಾಣ ಸಮಯ ಒಂದೂವರೆ ಗಂಟೆ ತಗುಲುತ್ತದೆ, ಹೀಗಾಗಿ ನಾವು ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದೇವೆ. ರಸ್ತೆ ತುಂಬಾ ಗುಂಡಿಗಳಿವೆ, ದೂಳು ಆವರಿಸಿಕೊಂಡಿದೆ. ಅದನ್ನು ಸರಿ ಮಾಡುವ ಕನಿಷ್ಠ ಉಮೇದು ಕೂಡ ಕಾಣಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇರುವ ಸಮಸ್ಯೆಗಳು ಐದು ವರ್ಷವಾದರೂ ಪರಿಹಾರವಾಗುವ ಭರವಸೆ ಇಲ್ಲ ಎಂದು ಹೇಳಿದ್ದಾರೆ.
ಆದರೆ ಎಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎನ್ನುವುದನ್ನು ಯಬಾಜಿ ತಿಳಿಸಿಲ್ಲ.
1500ಕ್ಕೂ ಅಧಿಕ ಉದ್ಯೋಗಿಗಳಿರುವ ಈ ಕಂಪನಿಯಲ್ಲಿ ಬಿ ಕ್ಯಾಪಿಟಲ್, ಅಸೀಲ್ ಹಾಗೂ ಗೋಲ್ಡ್ ಮ್ಯಾನ್ ಸಾಚ್ಸ್ ಮುಂತಾದ ಸಂಸ್ಥೆಗಳು ಹೂಡಿಕೆ ಮಾಡಿವೆ.
ಸ್ಥಳಾಂತರಗೊಳ್ಳುವ ಬಗ್ಗೆ ಯಾಬ್ಜಿಯವರ ಘೋಷಣೆ ಬೇಸರ ತಂದಿದೆ. ಬ್ಲ್ಯಾಕ್ಬಕ್ ಬೆಂಗಳೂರು ತೊರೆಯದಂತೆ ಪ್ರಯತ್ನಿಸುತ್ತೇವೆ. ಬೇರೆ ಸಂಸ್ಥೆಗಳು ಇದೇ ನಿರ್ಧಾರ ತಾಳುವ ಸಾಧ್ಯತೆ ಇದೆ ಎಂದು ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಹಾಗೂ ಕಾರ್ಖಾನೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಸಂಚಾರ ದಟ್ಟಣೆ, ರಸ್ತೆ ಗುಂಡಿಗಳು, ಹೆಚ್ಚಿದ ಪ್ರಯಾಣ ಸಮಯ ಹೀಗೆ ಹೊರವರ್ತುಲ ರಸ್ತೆಯಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಅಸಡ್ಡೆ ತೋರಿಸುತ್ತಿರುವ ಬಗ್ಗೆ ನಮಗೆ ತೀವ್ರ ಕಳವಳವಾಗುತ್ತಿದೆ. ಸಂಸ್ಥೆಗಳು ಸ್ಥಳಾಂತರಗೊಳ್ಳುವ ಬಗ್ಗೆ ಮಾತನಾಡುತ್ತಿರುವುದು, ಸರ್ಕಾರ ತ್ವರಿತವಾಗಿ ಮಧ್ಯಪ್ರವೇಶ ಮಾಡಬೇಕು ಎನ್ನುವುದನ್ನು ಸೂಚಿಸುತ್ತಿದೆ. ರಸ್ತೆ ಅಭಿವೃದ್ಧಿ, ಮೆಟ್ರೊ ಸಂಪರ್ಕ, ಸಾರ್ವಜನಿಕ ಸೌಲಭ್ಯ ನೀಡಲು ಪಾರದರ್ಶಕ ವ್ಯವಸ್ಥೆ ಮಾಡಬೇಕು ಎಂದು ನಾವು ಆಗ್ರಹಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಹಲವು ಸ್ಟಾರ್ಟಪ್ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು ಈ ಸಮಸ್ಯೆಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
‘ಹೊರವರ್ತುಲ ರಸ್ತೆಯಲ್ಲ 40–45 ನಿಮಿಷ ಕಳೆಯುತ್ತೇನೆ. ಅದೂ ಸಂಚಾರ ದಟ್ಟಣೆ ಅವಧಿ ಅಲ್ಲದ ಬೆಳಿಗ್ಗೆ 11.30ರ ವೇಳೆಗೆ. ಅದೇ ದೂರವನ್ನು ಬೆಳಿಗ್ಗೆ 6 ಗಂಟೆಗೆ 20 ನಿಮಿಷದಲ್ಲಿ ತಲುಪಬಹುದು’ ಎಂದು ಬ್ರೂಕ್ಫೀಲ್ಡ್ನ ನಾರ್ತನ್ ಟ್ರಸ್ಟ್ (Northern Trust) ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಲ್ಯಾಣ ನಗರದ ನಿವಾಸಿ ಸುಹಾಸ್ ರೆಡ್ಡಿ ಹೇಳಿದರು.
ಮಂಗಳವಾರ ಹಾಗೂ ಬುಧವಾರ ಸಂಚಾರ ದಟ್ಟಣೆ ಉಳಿದ ದಿನಗಳಿಗಿಂತ ಹೆಚ್ಚಾಗಿರುತ್ತದೆ ಎಂದು ಕಾರ್ಪೊರೇಟ್ ಉದ್ಯೋಗಿಗಳು ಅಭಿಪ್ರಾಯ ಹಂಚಿಕೊಂಡರು. ‘ಸಂಚಾರ ದಟ್ಟಣೆಯಿಂದಾಗಿ ನಾನು ಎರಡು ಗಂಟೆ ರಸ್ತೆಯಲ್ಲೇ ಕಳೆದ ದಿನಗಳಿವೆ. ಇದರಿಂದ ಭಾರಿ ಬಳಲುವಿಕೆ ಉಂಟಾಗುತ್ತದೆ. ಬೆಳಗಿನ ಅವಧಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೈಬ್ರಿಡ್ ಮಾದರಿಯನ್ನು ಬಿಟ್ಟು ಪ್ರತಿದಿನ ಕಚೇರಿಗೆ ಬನ್ನಿ ಎಂದು ಕಂಪನಿಗಳು ಒತ್ತಾಯಿಸುತ್ತಿರುವುದು ನಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಆದರೆ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ನಾವು ಅದನ್ನು ವಿರೋಧಿಸುತ್ತಿದ್ದೇವೆ. ನಮ್ಮ ಕೆಲಸದ ಮೇಲೆಯೂ ಪರಿಣಾಮ ಬೀರುತ್ತದೆ’ ಎಂದು ಬೆಳ್ಳಂದೂರಿನ ಕಂಪನಿಯನ್ನು ಕೆಲಸ ಮಾಡುತ್ತಿರುವ ಸ್ನೇಹ ಹೇಳಿದರು.
ಎಕ್ಸ್ನಲ್ಲೂ ಇಂಥಹದ್ದೇ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಬೆಳ್ಳಂದೂರು ನರಕದಂತೆ ಅನುಭವವಾಗುತ್ತಿದೆ. ರಸ್ತೆಗಳು ಕಳಪೆಯಾಗಿವೆ. ಪಾದಾಚಾರಿ ಸೌಲಭ್ಯಗಳು ಅರೆಬರೆಯಾಗಿವೆ, ದೂಳು ಸೇರಿ ಗಾಳಿ ದಪ್ಪವಾಗಿದೆ, ಹಸಿರು ಎನ್ನುವುದು ದೂರದ ಮಾತಾಗಿದೆ, ಪಾರ್ಕಿಂಗ್ ಮಾಡುವುದು ದುಃಸ್ವಪ್ನವಾಗಿ ಪರಿಣಮಿಸಿದೆ’ ಎಂದು ಶಂಕರ್ ಮೈಸೂರು (@MeShankara) ಎಂಬವರು ಬರೆದುಕೊಂಡಿದ್ದಾರೆ.
ಈ ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಉತ್ತಮ ಪಡಿಸುವ ಪ್ರಾಮುಖ್ಯತೆಯನ್ನು ಪೊಲೀಸ್ ಮಹಾನಿರ್ದೇಶಕರಾದ ಎಂ.ಎ ಸಲೀಂ ಪ್ರತಿಪಾದಿಸಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡದ ಹೊರತು ಸಂಚಾರ ದಿಕ್ಕು ಬದಲಾವಣೆಯಿಂದ ಯಾವುದೇ ಉಪಯೋಗವಿಲ್ಲ. ಸಮಸ್ಯೆ ಪರಿಹಾರಕ್ಕೆ ಇದೇ ಏಕೈಕ ಮಾರ್ಗ. ಹೊರವರ್ತುಲ ರಸ್ತೆಯಲ್ಲಿ ಶೀಘ್ರವೇ ಮೆಟ್ರೊ ಕಾಮಗಾರಿಗಳು ಮುಗಿಯಲಿವೆ. ಮೆಟ್ರೊ ಕಾರ್ಯಾರಂಭ ಮಾಡಿದ ಬಳಿಕ, ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ. ಪ್ರಯಾಣಕ್ಕೆ ಮೆಟ್ರೊ ಪ್ರಮುಖ ಆಯ್ಕೆಯಾಗಲಿದೆ. ಬಸ್ ಆದ್ಯತಾ ಪಥವೂ ಹೊರವರ್ತುಲ ರಸ್ತೆಯಲ್ಲಿ ಪುನಾರಂಭಗೊಳ್ಳಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.
ಮೆಟ್ರೊ ಕಾಮಗಾರಿಯಿಂದಾಗಿ ನಿಂತು ಹೋಗಿದ್ದ ಬಸ್ ಆದ್ಯತಾ ಪಥ ಜನವರಿಯಲ್ಲಿ ಮತ್ತೆ ಆರಂಭವಾಗಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದರೂ, ಈ ವರೆಗೆ ಪ್ರಗತಿ ಕಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.