ADVERTISEMENT

ಕಾಲ್ತುಳಿತ ದುರಂತ: RCB, KSCA ವಿರುದ್ಧ FIR, ವಿರಾಟ್ ಕೊಹ್ಲಿ ವಿರುದ್ಧವೂ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2025, 2:22 IST
Last Updated 7 ಜೂನ್ 2025, 2:22 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಪೊಲೀಸರು ಹಾಗೂ ಸಂಭ್ರಮಾಚರಣೆ ವೇಳೆ ವಿರಾಟ್‌ ಕೊಹ್ಲಿ</p></div>

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಪೊಲೀಸರು ಹಾಗೂ ಸಂಭ್ರಮಾಚರಣೆ ವೇಳೆ ವಿರಾಟ್‌ ಕೊಹ್ಲಿ

   

ಪ್ರಜಾವಾಣಿ ಚಿತ್ರಗಳು

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ' (ಕೆಎಸ್‌ಸಿಎ) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸರು ಎರಡು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ADVERTISEMENT

18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ ಆರ್‌ಸಿಬಿ ವಿಜಯೋತ್ಸವದ ಸಂದರ್ಭ (ಬುಧವಾರ) ಸಂಭವಿಸಿದ ದುರಂತದಲ್ಲಿ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಭಾರತ ಹಾಗೂ ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರೇ ಕಾಲ್ತುಳಿತಕ್ಕೆ ನೇರ ಹೊಣೆ ಎಂದು ಆರೋಪಿಸಿರುವ 'ನೈಜ ಹೋರಾಟಗಾರರ ವೇದಿಕೆ'ಯು ಪ್ರತ್ಯೇಕ ದೂರು ದಾಖಲಿಸಿದೆ. ಈಗಾಗಲೇ ಎಫ್‌ಐಆರ್‌ ದಾಖಲಾಗಿರುವ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಿರುವ ಪೊಲೀಸರು, ಅವರ ದೂರನ್ನು ಪರಿಶೀಲಿಸಿವುದಾಗಿ ತಿಳಿಸಿದ್ದಾರೆ.

ಕಾಲ್ತುಳಿತದಲ್ಲಿ ಗಾಯಗೊಂಡಿರುವ ರೋಲನ್‌ ಗೊಮೆಸ್‌ (25) ಹಾಗೂ ಸಿ. ವೇಣು (21) ಅವರು ನೀಡಿರುವ ದೂರುಗಳನ್ನು ಆಧರಿಸಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಕಾರ್ಯಕ್ರಮದ ಆಯೋಜನೆ ಹೊಣೆ ಹೊತ್ತಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ 'ಡಿಎನ್‌ಎ' ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ಸ್ಥಳೀಯ ಠಾಣೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಿರೀಶ್‌ ಎ.ಕೆ. ಅವರ ದೂರಿನ ಆಧಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಎಫ್‌ಐಆರ್‌ ದಾಖಲಾಗಿದೆ.

ಕ್ರೀಡಾಂಗಣದ ಪಾಸ್‌ ವಿಚಾರದಲ್ಲಿ ಸಂವಹನದ ಕೊರತೆ ಮತ್ತು ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ. ಇದಕ್ಕೆ ಆರ್‌ಸಿಬಿ, ಡಿಎನ್‌ಎ ಹಾಗೂ ಕೆಎಸ್‌ಸಿಎ ಕಾರಣ ಎಂದು ರೋಲನ್‌ ಹಾಗೂ ವೇಣು ಅವರಿಬ್ಬರೂ ಆರೋಪಿಸಿದ್ದಾರೆ.

ಮಧ್ಯಾಹ್ನ 3ಕ್ಕೆ ತಂಡದ ವಿಜಯೋತ್ಸವ ಮೆರವಣಿಗೆ ನಡೆಯಲಿದ್ದು, ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆತರಲಾಗುವುದು ಎಂಬುದಾಗಿ ಆರ್‌ಸಿಬಿಯು ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರ ಬೆಳಿಗ್ಗೆ ಪ್ರಕಟಿಸಿತ್ತು. ಹಾಗಾಗಿಯೇ, ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದಿದ್ದೆವು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, ರೋಲನ್‌ ಹಾಗೂ ಅವರ ಸ್ನೇಹಿತರು ಕ್ರೀಡಾಂಗಣದ ಗೇಟ್‌ ನಂ. 17ರ ಬಳಿ ಇದ್ದರು. ಗೇಟ್‌ ತೆರೆದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು. ಈ ವೇಳೆ ಗೊಮೆಸ್‌ ಅವರ ಬಲಗೈಗೆ ಗಾಯವಾಗಿದೆ ಎನ್ನಲಾಗಿದೆ.

ಗೇಟ್‌ ನಂ. 6 ಅನ್ನು ಸಂಜೆ 4.20ಕ್ಕೆ ಗೇಟ್‌ ತೆರೆಯಲಾಯಿತು. ಭಾರಿ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿತು. ಹಲವರು ಕೆಳಗೆ ಬಿದ್ದು, ಅವರ ಮೇಲೆಯೇ ಜನರು ನುಗ್ಗಿದರು ಎಂಬುದಾಗಿ ಸ್ನೇಹಿತರೊಂದಿಗೆ ಸ್ಥಳದಲ್ಲಿದ್ದ ವೇಣು ಹೇಳಿದ್ದಾರೆ. ವ್ಯಕ್ತಿಯೊಬ್ಬರು ಬ್ಯಾರಿಕೇಡ್‌ ಏರಿದಾಗ, ಅದು ವೇಣು ಅವರ ಕಾಲಿನ ಮೇಲೆ ಬಿದ್ದು ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.