
ಬೆಂಗಳೂರು: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ನಾಲ್ಕು ಕಂಪನಿಗಳು ಬಿಡ್ ಸಲ್ಲಿಸಿವೆಯಾದರೂ, ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ಒಡ್ಡಿರುವ ಷರತ್ತಿನ ಕಾರಣಕ್ಕೆ ಎರಡು ಕಂಪನಿಗಳ ಬಿಡ್ ತಿರಸ್ಕೃತವಾಗುವ ಸಾಧ್ಯತೆ ಇದೆ.
ಬಿ–ಸ್ಮೈಲ್, ‘ಬಿಡ್ ಸಲ್ಲಿಸುವ ಕಂಪನಿಗಳು ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸಿದ ರಸ್ತೆ, ಸುರಂಗ, ಸೇತುವೆ, ಮೇಲ್ಸೇತುವೆ, ಮೆಟ್ರೊ ರೈಲು ಮಾರ್ಗಗಳು ಕುಸಿದಿರಬಾರದು’ ಎಂದು ಷರತ್ತು ಒಡ್ಡಿದೆ.
ಈ ಯೋಜನೆಗೆ ಅದಾನಿ ಗ್ರೂಪ್, ದಿಲಿಪ್ ಬಿಲ್ಡ್ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್) ಬಿಡ್ ಸಲ್ಲಿಸಿದ್ದು, ಮೇಲಿನ ಷರತ್ತಿನ ಕಾರಣಕ್ಕೆ ಎರಡು ಕಂಪನಿಗಳು ತಾಂತ್ರಿಕ ಅರ್ಹತೆ ಕಳೆದುಕೊಳ್ಳುತ್ತವೆ.
ದಿಲಿಪ್ ಬಿಲ್ಡ್ಕಾನ್ ಕಂಪನಿಯು ಆಂಧ್ರಪ್ರದೇಶದಲ್ಲಿ ನಿರ್ಮಿಸಿದ್ದ ಅಂಕಪಲ್ಲಿ ಮೇಲ್ಸೇತುವೆಯು 2021ರ ಜುಲೈನಲ್ಲಿ ಕುಸಿದಿತ್ತು. ಈ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದರು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ₹3 ಕೋಟಿ ದಂಡ ವಿಧಿಸಿತ್ತು.
ಅದಾನಿ ಗ್ರೂಪ್, ಕೇರಳದಲ್ಲಿ ನಿರ್ಮಿಸಿದ್ದ ಅಳಿಯೂರ್–ವೆಂಗಲಮ್ ರಾಷ್ಟ್ರೀಯ ಹೆದ್ದಾರಿ ಒಂದು ಭಾಗವು ಕುಸಿದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಎನ್ಎಚ್ಎಐ, ಕಂಪನಿಯನ್ನು ಒಂದು ವರ್ಷ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಅವಘಡಗಳ ಕಾರಣದಿಂದಾಗಿ ದಿಲಿಪ್ ಬಿಲ್ಡ್ಕಾನ್ ಮತ್ತು ಅದಾನಿ ಗ್ರೂಪ್ನ ಬಿಡ್ಗಳು ತಿರಸ್ಕೃತವಾಗುವ ಸಾಧ್ಯತೆ ಇದೆ.
ಇದಲ್ಲದೆ ಬಿ–ಸ್ಮೈಲ್, 2024–25ನೇ ಸಾಲಿನಲ್ಲಿ ಒಟ್ಟು ಮೌಲ್ಯ ₹2,192 ಕೋಟಿಯಷ್ಟಿರುವ ಕಂಪನಿಗಳು ಮಾತ್ರ ಬಿಡ್ ಸಲ್ಲಿಸಬೇಕು ಎಂದು ಇನ್ನೊಂದು ಷರತ್ತು ಹಾಕಿದೆ. ಬಿಡ್ ಸಲ್ಲಿಸಿರುವ ಎಲ್ಲ ಕಂಪನಿಗಳ ಮೌಲ್ಯ ಇಷ್ಟುಇಲ್ಲ. ಇದೂ ಸಹ ಬಿಡ್ ತಿರಸ್ಕೃತವಾಗಲು ಕಾರಣವಾಗಬಹುದು ಎನ್ನಲಾಗಿದೆ.
ಜತೆಗೆ ಶೇ 60ರಷ್ಟು ಹೂಡಿಕೆಯನ್ನು ಕಂಪನಿಗಳೇ ಮಾಡಬೇಕಿದ್ದು, ಅದನ್ನು ಬಳಕೆದಾರರ ಶುಲ್ಕ ಮತ್ತು ವಾಣಿಜ್ಯ ಕೇಂದ್ರಗಳ ಅಭಿವೃದ್ಧಿಯಿಂದ ಗಳಿಸಿಕೊಳ್ಳಬೇಕು ಎಂಬ ಷರತ್ತು ಇದೆ. ಇದು ಕಾರ್ಯಸಾಧುವಲ್ಲ. ಹೀಗಾಗಿ ಸುರಂಗ ರಸ್ತೆ ನಿರ್ಮಾಣದಲ್ಲಿ ಅನುಭವ ಹೊಂದಿರುವ ಎಲ್ ಆ್ಯಂಡ್ ಟಿ, ಟಾಟಾ ಗ್ರೂಪ್, ಆಫ್ಕಾನ್ಸ್, ಎಚ್ಸಿಸಿ ಕಂಪನಿಗಳು ಟೆಂಡರ್ನಿಂದ ದೂರ ಉಳಿದಿವೆ ಎಂದು ಬಿ–ಸ್ಮೈಲ್ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.