ADVERTISEMENT

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 11:38 IST
Last Updated 27 ಡಿಸೆಂಬರ್ 2025, 11:38 IST
<div class="paragraphs"><p>ಗಾನವಿ ಹಾಗೂ ಸೂರಜ್‌</p></div>

ಗಾನವಿ ಹಾಗೂ ಸೂರಜ್‌

   

ಬೆಂಗಳೂರು: ಬಿ.ಚನ್ನಸಂದ್ರ ನಿವಾಸಿ, ನವ ವಿವಾಹಿತೆ ಗಾನವಿ (24) ಅವರ ಆತ್ಮಹತ್ಯೆ ಪ್ರಕರಣವು ತಿರುವು ಪಡೆದಿದ್ದು, ಅವರ ಪತಿ ಸೂರಜ್‌ ಸಹ ಮಹಾರಾಷ್ಟ್ರದ ನಾಗ್ಪುರದ ವಿಲ್ಲಾದಲ್ಲಿ ಶುಕ್ರವಾರ ರಾತ್ರಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೂರಜ್‌ ಅವರ ತಾಯಿ ಜಯಂತಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆ
ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT


ವಿದ್ಯಾರಣ್ಯಪುರದಲ್ಲಿ ನೆಲಸಿದ್ದ ಸೂರಜ್‌ ಹಾಗೂ ಬಿ.ಚನ್ನಸಂದ್ರದ ಗಾನವಿ ಅ. 29ರಂದು ವಿವಾಹ
ವಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

ಶ್ರೀಲಂಕಾಗೆ ಹತ್ತು ದಿನಗಳ ಹನಿಮೂನ್‌ಗೆ ದಂಪತಿ ತೆರಳಿದ್ದರು. ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಭಾನುವಾರ ಮನೆಗೆ ಬಂದಿದ್ದರು. ನಂತರ, ಮನೆಯಲ್ಲೂ ಜಗಳ ನಡೆದಿತ್ತು. ಗಾನವಿ ಅವರನ್ನು ಪೋಷಕರು ಮನೆಗೆ ಕರೆದೊಯ್ದಿದ್ದರು. ಬುಧವಾರ ಮಧ್ಯಾಹ್ನ ಗಾನವಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಮಿದುಳು ನಿಷ್ಕ್ರಿಯಗೊಂಡಿದೆ
ಎಂದು ವೈದ್ಯರು ತಿಳಿಸಿದ್ದರು. ಗುರುವಾರ ರಾತ್ರಿ ಗಾನವಿ ಮೃತಪಟ್ಟಿ ದ್ದರು. ಮೃತದೇಹವನ್ನು ಶುಕ್ರವಾರ ಮಧ್ಯಾಹ್ನ ವಿದ್ಯಾರಣ್ಯಪುರದ ಸೂರಜ್‌ ನಿವಾಸಕ್ಕೆ ತಂದು ಪೋಷಕರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

ಶ್ರೀಲಂಕಾದಲ್ಲಿ ಇದ್ದಾಗಲೇ ಗಾನವಿ ಹಾಗೂ ಸೂರಜ್‌ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಮೂವರು: ಸೂರಜ್‌, ಅವರ ಸಹೋದರ ಸಂಜಯ್‌, ತಾಯಿ ಜಯಂತಿ ವಿರುದ್ಧ ಗಾನವಿ ಪೋಷಕರು ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪದ ಅಡಿ ದೂರು ನೀಡಿದ್ದರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಮೇಲೆ ಮೂವರು ತಲೆಮರೆಸಿಕೊಂಡಿದ್ದರು.

ಗಾನವಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿ ರಾಯಲ್‌ ವಿಲ್ಲಾ ಹೋಟೆಲ್‌ನಲ್ಲಿ ತಂಗಿದ್ದರು. ಗಾನವಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ,ಸೂರಜ್‌, ಜಯಂತಿ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸೂರಜ್‌ ಮೃತಪಟ್ಟರೆ, ಜಯಂತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಮೊಬೈಲ್‌ ಪರಿಶೀಲನೆ ನಡೆಸಲಾಗಿದ್ದು ಅದರಲ್ಲೂ ಯಾವುದೇ ಸಂದೇಶಗಳು ಇಲ್ಲ. ನಾಗ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ
ಸೂರಜ್‌ ಮರಣೋತ್ತರ ಪರೀಕ್ಷೆ ನಡೆದಿದೆ. ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ’ ಎಂದು ಮೂಲಗಳು ಹೇಳಿವೆ.

ಶ್ರೀಲಂಕಾದಲ್ಲೇ ಮನಸ್ತಾಪ

ಗಾನವಿ ಮತ್ತು ಸೂರಜ್‌ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದಾಗ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಗಾನವಿ ಪೋಷಕರು ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಲಾಗಿತ್ತು. ಅಷ್ಟರಲ್ಲಿ ಅವರ ಪತಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಭೀತಿಯಿಂದ ಆತ್ಮಹತ್ಯೆ?

ಸೂರಜ್ ಕುಟುಂಬವು ಶುಕ್ರವಾರ ಮುಂಜಾನೆ ನಾಗ್ಪುರಕ್ಕೆ ಬಂದಿತ್ತು. ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮೂವರು ಭಯಗೊಂಡಿದ್ದರು. ಭಯದಿಂದಲೇ ಆತ್ಮಹತ್ಯೆ ಮಾಡಿ
ಕೊಂಡಿರುವ ಸಾಧ್ಯತೆಯಿದೆ ಎಂದು ನಾಗ್ಪುರ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.