ರೈಲ್ವೆ ಕಾಲೊನಿಯಲ್ಲಿರುವ 368 ಮರಗಳಿರುವ ಪ್ರದೇಶ
ಬೆಂಗಳೂರು: ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿರುವ 368 ಮರಗಳಿರುವ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧ್ಯಕ್ಷತೆಯಲ್ಲಿ ಜೂನ್ 25ರಂದು ನಡೆದ ವಿಶೇಷ ಸಭೆಯಲ್ಲಿ ‘ಕಂಟೋನ್ಮೆಂಟ್ ರೈಲ್ವೆ ಕಾಲೊನಿಯ ಆವರಣದಲ್ಲಿರುವ ಸುಮಾರು ಎಂಟು ಎಕರೆಯಲ್ಲಿ 368 ವಿವಿಧ ಜಾತಿಯ ಮರಗಳ ಕುರಿತು ಚರ್ಚಿಸಿ, ಜೀವ ವೈವಿಧ್ಯ ಕಾಯ್ದೆ–2002 ಮತ್ತು ಕರ್ನಾಟಕ ಜೀವ ವೈವಿಧ್ಯ ನಿಯಮಗಳು–2005ರ ನಿಯಮ 20ರಡಿ ಆ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಯಿತು’ ಎಂದು ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿರುವ ಮರಗಳು, ಗಿಡಗಳು, ಪೊದೆಗಳು, ಪಕ್ಷಿ ಮತ್ತು ಪ್ರಾಣಿಗಳ ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 30ರೊಳಗೆ ಆಕ್ಷೇಪಣೆ, ಸಲಹೆಗಳಿದ್ದರೆ ನೀಡಬಹುದು ಎಂದು ಹೇಳಿದ್ದಾರೆ.
‘ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 368 ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಕಾರ್ಯಕರ್ತರು, ವಿಶ್ವ ಪರಿಸರ ದಿನದಂದು ಮರಗಳಿಗೆ ‘ವೃಕ್ಷ ರಕ್ಷಾ ಬಂಧನ’ವಾಗಿ ಕೆಂಪು ಪಟ್ಟಿಯನ್ನು ಕಟ್ಟಿದ್ದರು.
‘ಮರಗಳನ್ನು ಕಡಿಯಲು ಅವಕಾಶ ನೀಡದೆ, ಪಾರಂಪರಿಕ ಮರಗಳನ್ನು ರಕ್ಷಿಸಬೇಕು’ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿದ್ದರು.
ಜ್ಞಾನಭಾರತಿಯೂ ಪಾರಂಪರಿಕ ತಾಣ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣವನ್ನು ಜೀವವೈವಿಧ್ಯದ ಪಾರಂಪರಿಕ ತಾಣವನ್ನಾಗಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಸದ್ಯದಲ್ಲಿಯೇ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಅರಣ್ಯ ಸಚಿವರಿಗೆ ಪ್ರಸ್ತಾವ ಸಲ್ಲಿಸಲಿದ್ದಾರೆ.
‘ಜ್ಞಾನಭಾರತಿ ಆವರಣದಲ್ಲಿ ಲಕ್ಷಾಂತರ ಬೃಹತ್ ಮರಗಳಿದ್ದು, ಇಲ್ಲಿನ ಜೀವವೈವಿಧ್ಯವನ್ನು ಮುಂದಿನ ಪೀಳಿಗೆಗೆ ಕಾಪಾಡಬೇಕು. ನಗರದ ಹಸಿರು ವಲಯವನ್ನು ರಕ್ಷಿಸುವ ಹೊಣೆ ಇಲಾಖೆ ಮೇಲಿದೆ. ಆದರೆ, ಜ್ಞಾನಭಾರತಿಯಲ್ಲಿ ಮರಗಳನ್ನು ಕಡಿದು ವಿವಿಧ ನಿರ್ಮಾಣ ಕಾರ್ಯ ಕೈಗೊಳ್ಳಲು ಪ್ರಯತ್ನ ನಡೆಯುತ್ತಿವೆ. ಇವುಗಳನ್ನು ನಿಗ್ರಹಿಸಿ, ಜೀವವೈವಿಧ್ಯ ರಕ್ಷಿಸುವಂತೆ ಪರಿಸರ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಇದರಂತೆ ಪಾರಂಪರಿಕ ತಾಣವನ್ನಾಗಿ ಘೋಷಿಸಲು ಪ್ರಸ್ತಾವ ಮಂಡಿಸಿ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಜೀವವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿಯವರಿಗೆ ಮೇ 13ರಂದು ಪತ್ರ ಬರೆದಿದ್ದರು.
‘ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿದ್ದು, ವರದಿ ಪ್ರಸ್ತಾವ ಸಿದ್ಧಗೊಳ್ಳುತ್ತಿದೆ. ಜೀವವೈವಿಧ್ಯ ಮಂಡಳಿಯ ಮುಂದಿನ ಸಭೆಯಲ್ಲಿ ಪ್ರಸ್ತಾವ ಮಂಡನೆಯಾಗಲಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.