ADVERTISEMENT

ಬೆಂಗಳೂರು: ವಾಣಿವಿಲಾಸ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ

ರಕ್ತದ ಅಭಾವ ನೀಗಿಸಲು ಹೊಸ ಕೇಂದ್ರ ಸ್ಥಾಪನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 14:17 IST
Last Updated 24 ಏಪ್ರಿಲ್ 2025, 14:17 IST
ವಾಣಿವಿಲಾಸ ಆಸ್ಪತ್ರೆ
ವಾಣಿವಿಲಾಸ ಆಸ್ಪತ್ರೆ   

ಬೆಂಗಳೂರು: ತಾಯಂದಿರ ಸಾವು ತಡೆ ಹಾಗೂ ನಗರದಲ್ಲಿ ರಕ್ತದ ಅಭಾವ ನೀಗಿಸುವ ಉದ್ದೇಶದಿಂದ ವಾಣಿವಿಲಾಸ ಆಸ್ಪತ್ರೆಯಲ್ಲಿ ಹೊಸದಾಗಿ ರಕ್ತನಿಧಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ. 

ಈ ಕೇಂದ್ರ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯು ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ನಗರದ ಕೇಂದ್ರ ಸ್ಥಳದಲ್ಲಿರುವ ವಾಣಿವಿಲಾಸ ಆಸ್ಪತ್ರೆಯು, ರಾಜ್ಯ ಮಟ್ಟದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಾಗಿದೆ. ತೃತೀಯ ಹಂತದ ಈ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ಶಿಫಾರಸು ಆಧಾರದಲ್ಲಿ ತಾಯಂದಿರು ಹಾಗೂ ಮಕ್ಕಳು ಬರುತ್ತಾರೆ. ಪ್ರತಿನಿತ್ಯ ಸರಾಸರಿ 1,500ರಿಂದ 1,800 ಹೊರ ರೋಗಿಗಳು, 350ರಿಂದ 500 ಒಳ ರೋಗಿಗಳು ಭೇಟಿ ನೀಡುತ್ತಾರೆ. ವಾರ್ಷಿಕ 3,600 ಯುನಿಟ್ ರಕ್ತದ ಅವಶ್ಯವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡುವ, ರಕ್ತದ ಅಗತ್ಯವಿರುವ ತಾಯಂದಿರು ವಿಕ್ಟೋರಿಯಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮೇಲೆ ಅವಲಂಬಿತರಾಗಿರುತ್ತಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕೇಂದ್ರದಲ್ಲಿ ವಾರ್ಷಿಕ 8 ಸಾವಿರ ಯುನಿಟ್ ರಕ್ತಕ್ಕೆ ಬೇಡಿಕೆಯಿದೆ. ಆ ಕೇಂದ್ರವು ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಸರ್ಕಾರಿ ರಕ್ತನಿಧಿ ಕೇಂದ್ರ ಹಾಗೂ ರಕ್ತ ಶೇಖರಣಾ ಘಟಕಗಳಿಗೆ ಮಾತೃ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಸಕಾಲದಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ರಕ್ತವನ್ನು ಪಡೆಯುವುದು ಮತ್ತು ಪೂರೈಸುವುದು ಕಷ್ಟಸಾಧ್ಯ ಎನ್ನಲಾಗಿದೆ. 

ADVERTISEMENT

ವಾಣಿವಿಲಾಸ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ರಕ್ತನಿಧಿ ಕೇಂದ್ರ ಕಾರ್ಯಾರಂಭಿಸಿದಲ್ಲಿ, ನಿಗದಿತ ಸಮಯದಲ್ಲಿ ತಾಯಂದಿರಿಗೆ ರಕ್ತ ಒದಗಿಸಲು ಸಾಧ್ಯ. ಆದ್ದರಿಂದ ಅಗತ್ಯ ಯಂತೋಪ್ರಕರಣ ಅಳವಡಿಸಿಕೊಂಡು, ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ಪ್ರಾರಂಭಿಸಬೇಕು ಎಂದು ತಿಳಿಸಲಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಹಾಗೂ ಗೋಕಾಕ್‌ ತಾಲ್ಲೂಕು ಆಸ್ಪತ್ರೆಯಲ್ಲಿಯೂ ರಕ್ತನಿಧಿ ಕೇಂದ್ರ ಸ್ಥಾ‍ಪನೆಗೆ ಅನುಮೋದನೆ ನೀಡಿ, ಆದೇಶ ಹೊರಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.