
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿಯೊಬ್ಬರ ಸ್ನೇಹಿತ ವೈಶಾಕ್ ಎಂಬುವವರನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಟಿಯ ಮನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಅರವಿಂದ ರೆಡ್ಡಿ ಅವರಿಗೆ ಜನವರಿಯಲ್ಲಿ ಆರೋಪಿ ವೈಶಾಕ್ ಅವರು ಕೊರಿಯರ್ ಮೂಲಕ ಬೆದರಿಕೆ ಪತ್ರ ಕಳುಹಿಸಿದ್ದರು. ವಿಳಾಸ ಹಾಗೂ ಸಹಿ ಇಲ್ಲದ ಅನಾಮಧೇಯ ಬೆದರಿಕೆ ಪತ್ರವಾಗಿತ್ತು. ‘ನಟಿಯ ಜತೆಗೆ ಇರುವ ಜಗಳವನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನನ್ನ ಗ್ಯಾರೇಜ್ಗೆ ₹6ರಿಂದ ₹7 ಕೋಟಿ ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಬೆದರಿಕೆ ಪತ್ರದ ವಿರುದ್ಧ ಅರವಿಂದ ರೆಡ್ಡಿ ಅವರು ದೂರು ನೀಡಿದ್ದರು. ಈ ಸಂಬಂಧ ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಕಾರ್ಯಾಚರಣೆ ಆರಂಭಿಸಿದಾಗ ಬನಶಂಕರಿ ಬಳಿಯ ಬ್ಲೂ–ಡಾರ್ಟ್ ಕೊರಿಯರ್ ಮೂಲಕ ಪತ್ರ ಬಂದಿರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಲಾಯಿತು. ಗ್ಯಾರೇಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ‘ಮಾಲೀಕರು ಹೇಳಿದಂತೆ ನಾನು ಪತ್ರ ಕೊರಿಯರ್ ಮಾಡಿದ್ದೇನೆ. ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿ ತಿಳಿದಿಲ್ಲ’ ಎಂದು ಯುವಕ ಹೇಳಿದ್ದರು. ಈ ಮಾಹಿತಿಯ ಆಧಾರದಲ್ಲಿ ಗ್ಯಾರೇಜ್ ಮಾಲೀಕನ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ವೈಶಾಕ್ ಅವರು ಪತ್ರ ಕಳುಹಿಸಿರುವುದು ಎಂಬುದು ಪತ್ತೆಯಾಗಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಉದ್ಯಮಿ, ನಿರ್ಮಾಪಕ ಅರವಿಂದ ರೆಡ್ಡಿ ಹಾಗೂ ಸ್ಯಾಂಡಲ್ವುಡ್ ನಟಿಯ ನಡುವೆ ಈ ಹಿಂದೆ ಗಲಾಟೆ ಆಗಿತ್ತು. ಅರವಿಂದ್ ರೆಡ್ಡಿ ವಿರುದ್ಧ ನಟಿ ದೂರು ನೀಡಿದ್ದರು. ಅರವಿಂದ್ ರೆಡ್ಡಿ ಅವರ ಬಂಧನವಾಗಿತ್ತು. ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು’ ಎಂದು ಪೊಲೀಸರು ಹೇಳಿದರು.
ವಿಚಾರಣೆಗೆ ಬರುವಂತೆ ನಟಿಗೆ ನೋಟಿಸ್?
ಬೆದರಿಕೆ ಪತ್ರ ಕಳುಹಿಸಿದ ನಂತರ ನಟಿಯ ಮನೆಯಲ್ಲಿಯೇ ಆರೋಪಿ ಇದ್ದರು. ಆರೋಪಿ ಬಳಸಿದ್ದ ಮೊಬೈಲ್ ನಟಿಯ ಮನೆಯಲ್ಲಿ ಬಚ್ಚಿಟ್ಟಿದ್ದರು. ಆರೋಪಿಯ ಮೊಬೈಲ್ ಜಪ್ತಿ ಮಾಡಲಾಗಿದೆ. ಈ ಪ್ರಕರಣದ ಸಂಬಂಧ ನಟಿಗೂ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.