ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ಸಿದ್ದಮ್ಮ (45) ಎಂಬುವರನ್ನು ಆಟೊದಲ್ಲಿ ಹತ್ತಿಸಿಕೊಂಡಿದ್ದ ಚಾಲಕನೊಬ್ಬ, ಅವರ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ.
ಆ ಸಂಬಂಧ ಸಿದ್ದಮ್ಮ, ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಸಿದ್ದಮ್ಮ, ನ. 5ರಂದು ಪೀಣ್ಯದ 2ನೇ ಹಂತದಲ್ಲಿರುವ ಗಾರ್ಮೇಂಟ್ಸ್ ಕಾರ್ಖಾನೆಯೊಂದರಲ್ಲಿ ವಿಚಾರಿಸಲು ಹೊರಟಿದ್ದರು. ಅದೇ ವೇಳೆ ಎದುರಿಗೆ ಬಂದು ಮಾತನಾಡಿಸಿದ್ದ ಆಟೊ ಚಾಲಕ, ಕೆಲಸ ಕೊಡಿಸುವುದಾಗಿ ಆಟೊದಲ್ಲಿ ಹತ್ತಿಸಿಕೊಂಡು ಹೋಗಿದ್ದ’ ಎಂದು ಪೀಣ್ಯ ಪೊಲೀಸರು ಹೇಳಿದರು.
‘ಚಿನ್ನದ ಸರ ಹಾಕಿಕೊಂಡರೆ ಕೆಲಸ ಸಿಗುವುದಿಲ್ಲ’ ಎಂದಿದ್ದ ಚಾಲಕ, ಸರವನ್ನು ಹಾಳೆಯಲ್ಲಿ ಸುತ್ತಿಟ್ಟುಕೊಳ್ಳುವಂತೆ ಹೇಳಿದ್ದ. ನಂತರ, ‘ಆಧಾರ್ ಕಾರ್ಡ್ ಬೇಕು. ಅದರ ಜೆರಾಕ್ಸ್ ಮಾಡಿಸಿಕೊಂಡು ಬನ್ನಿ’ ಎಂದು ಅಂಗಡಿಗೆ ಕಳುಹಿಸಿದ್ದ. ಹೋಗುವ ವೇಳೆಯಲ್ಲಿ ಸರವಿದ್ದ ಹಾಳೆಯನ್ನು ಪಡೆದುಕೊಂಡಿದ್ದ. ಅಂಗಡಿಯಿಂದ ಮಹಿಳೆ ವಾಪಸ್ ಬರುವಷ್ಟರಲ್ಲೇ ಆ ಚಾಲಕ, ಸ್ಥಳದಿಂದ ಹೊರಟು ಹೋಗಿದ್ದಾನೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.