ADVERTISEMENT

ಚಿತ್ರಕಲಾ ಪರಿಷತ್ತು: ರಂಗಕರ್ಮಿ ಪ್ರಸನ್ನ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 15:47 IST
Last Updated 30 ಅಕ್ಟೋಬರ್ 2025, 15:47 IST
<div class="paragraphs"><p>ಪ್ರಸನ್ನ ಅವರು ತಮ್ಮ ಕಲಾಕೃತಿಗಳ ಬಗ್ಗೆ ವಿವರಿಸಿದರು. (ಎಡದಿಂದ) ಎಚ್.ಎನ್. ಆರತಿ,&nbsp;ಅರುಣ್ ರಾಮನ್, ಹಂಪ ನಾಗರಾಜಯ್ಯ,&nbsp;ರವೀಂದ್ರ ತ್ರಿಪಾಠಿ, ಪ.ಸ. ಕುಮಾರ್ ಅವರು ಕಲಾಕೃತಿಗಳನ್ನು ವೀಕ್ಷಿಸಿದರು</p></div>

ಪ್ರಸನ್ನ ಅವರು ತಮ್ಮ ಕಲಾಕೃತಿಗಳ ಬಗ್ಗೆ ವಿವರಿಸಿದರು. (ಎಡದಿಂದ) ಎಚ್.ಎನ್. ಆರತಿ, ಅರುಣ್ ರಾಮನ್, ಹಂಪ ನಾಗರಾಜಯ್ಯ, ರವೀಂದ್ರ ತ್ರಿಪಾಠಿ, ಪ.ಸ. ಕುಮಾರ್ ಅವರು ಕಲಾಕೃತಿಗಳನ್ನು ವೀಕ್ಷಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ಹಮ್ಮಿಕೊಂಡಿರುವ ರಂಗಕರ್ಮಿ ಪ್ರಸನ್ನ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು. 

ADVERTISEMENT

‘ನಾಟಕವು ಬದುಕಿನೊಳಗೋ ಬದುಕು ನಾಟಕದೊಳಗೋ’ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಈ ಪ್ರದರ್ಶನದಲ್ಲಿ ಅವರು ರಚಿಸಿದ 78 ಕಲಾಕೃತಿಗಳನ್ನು ಇರಿಸಲಾಗಿದೆ. ಕಲಾ ವಿಮರ್ಶಕ ರವೀಂದ್ರ ತ್ರಿಪಾಠಿ ಅವರು ಈ ಪ್ರದರ್ಶನ ಉದ್ಘಾಟಿಸಿ, ಕಲಾಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಪ್ಪು–ಬಿಳುಪಿನ ಕಲಾಕೃತಿಗಳು ಪ್ರಭುತ್ವ ಮತ್ತು ಮನುಷ್ಯನ ನಡುವಿನ ಸಂಘರ್ಷ, ನಿಸರ್ಗದ ಜತೆಗೆ ಸಹಬಾಳ್ವೆ ಹಾಗೂ ಸಂಘರ್ಷದಂತಹ ವಿಷಯಗಳನ್ನು ಕೇಂದ್ರೀಕರಿಸಿವೆ. 13x19 ಇಂಚು ಅಳತೆಯ ಈ ಕಲಾಕೃತಿಗಳಿಗೆ ಕನಿಷ್ಠ ಬೆಲೆ ₹ 7 ಸಾವಿರ ನಿಗದಿಪಡಿಸಲಾಗಿದೆ.

‘ರಂಗಭೂಮಿಯ ಗಾಢವಾದ ಪ್ರಭಾವ ಈ ಚಿತ್ರಗಳ ಮೇಲಿದೆ. ಈ ಚಿತ್ರಗಳನ್ನು ಬಿಡಿಸುವಾಗ ಪಾತ್ರಗಳಾಗಿ ಗ್ರಹಿಸಿ, ಪಾತ್ರ ಪಾತ್ರಗಳ ನಡುವಿನ ಘರ್ಷಣೆ, ತಿಕ್ಕಾಟ, ಪ್ರೀತಿ ಎಲ್ಲವನ್ನೂ ತಂದಿದ್ದೇನೆ. ಈ ಕಲಾಕೃತಿಗಳ ಮಾರಾಟದಿಂದ ಬರುವ ಎಲ್ಲ ಹಣವನ್ನು ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಗೆ ನೀಡುತ್ತಿದ್ದೇನೆ. ವಿವಿಧ ರಾಜ್ಯಗಳಲ್ಲಿಯೂ ಈ ಪ್ರದರ್ಶನ ನಡೆಯಲಿದೆ’ ಎಂದು ಪ್ರಸನ್ನ ಹೇಳಿದರು.

‘ಕಲಾಕೃತಿಗಳಿಗೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆ ರೂಪದಲ್ಲಿ ನೀಡಬಹುದಾಗಿದೆ. ಮಕ್ಕಳ ರಂಗ ಶಿಕ್ಷಣಕ್ಕೆ ಆ ಹಣ ಸಹಕಾರಿಯಾಗಲಿದೆ’ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ಸಾಹಿತಿ ಹಂಪ ನಾಗರಾಜಯ್ಯ, ಲೇಖಕ ಅರುಣ್ ರಾಮನ್, ದೂರದರ್ಶನ ಚಂದನದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಎಚ್.ಎನ್. ಆರತಿ ಉಪಸ್ಥಿತರಿದ್ದರು.

ಈ ಪ್ರದರ್ಶನವು ಚಿತ್ರಕಲಾ ಪರಿಷತ್ತಿನ ಗ್ಯಾಲರಿ 4ರಲ್ಲಿ ನ.2ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.