ADVERTISEMENT

ಕೆಐಎ; ಪ್ರವೇಶ ದ್ವಾರದಲ್ಲೇ ತಪಾಸಣೆ

ಭದ್ರತಾ ಸಿಬ್ಬಂದಿಗೆ ಆರೋಗ್ಯದ ಪ್ರಮಾಣಪತ್ರ ತೋರಿಸಿದರಷ್ಟೆ ನಿಲ್ದಾಣದಿಂದ ಹೊರಬರಲು ಅನುಮತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:12 IST
Last Updated 10 ಮಾರ್ಚ್ 2020, 22:12 IST
ಮಾಸ್ಕ್ ಧರಿಸಿಕೊಂಡೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದ ಪ್ರಯಾಣಿಕರು – ಪ್ರಜಾವಾಣಿ ಚಿತ್ರ
ಮಾಸ್ಕ್ ಧರಿಸಿಕೊಂಡೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದ ಪ್ರಯಾಣಿಕರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲೂ ಕೋವಿಡ್‌–19 ಪ‍್ರಕರಣಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೊರದೇಶಗಳಿಂದ ಬರುವ ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಹೊರದೇಶಗಳಿಂದ ವಿಮಾನಗಳಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ನಿಲ್ದಾಣದೊಳಗೆ ಪ್ರವೇಶಿಸುವ ಬಾಗಿಲಿನಲ್ಲೇ ನಿಲ್ಲಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಕ್ರೀನಿಂಗ್‌ ಸಾಧನಗಳನ್ನು ಬಳಸಿಕೊಂಡು ಪ್ರತಿಯೊಬ್ಬ ಪ್ರಯಾಣಿಕರ ಮುಖ ಹಾಗೂ ಕೈಗಳನ್ನು ಪರೀಕ್ಷಿಸಲಾಗುತ್ತಿದೆ. ಅವರ ಆರೋಗ್ಯದ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.

ಪ್ರಯಾಣಿಕರ ಹೆಸರು ಹಾಗೂ ವಿಳಾಸವನ್ನು ದಾಖಲಿಸಿಕೊಂಡು ಆರೋಗ್ಯದ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿದೆ. ಆ ಪ್ರಮಾಣ ಪತ್ರವನ್ನು ನಿಲ್ದಾಣದ ಭದ್ರತಾ ಸಿಬ್ಬಂದಿಗೆ ತೋರಿಸಿದ ಪ್ರಯಾಣಿಕರನ್ನು ಮಾತ್ರ ಹೊರಗೆ ಬಿಡಲಾಗುತ್ತಿದೆ. ಪ್ರಮಾಣ ಪತ್ರ ಇಲ್ಲದವರನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ಪುನಃ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ADVERTISEMENT

ಆರೋಗ್ಯ ಇಲಾಖೆ ಹಾಗೂ ವಿಮಾನ ನಿಲ್ದಾಣ ಆರೋಗ್ಯ ಪ್ರಾಧಿಕಾರ ಸಹಯೋಗದಲ್ಲಿ ವಿಶೇಷ ತಂಡಗಳು ತಪಾಸಣೆ ಕೆಲಸದಲ್ಲಿ ನಿರತವಾಗಿವೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರೂ ಮಂಗಳವಾರ ನಿಲ್ದಾಣಕ್ಕೆ ಭೇಟಿ ನೀಡಿ ತಪಾಸಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

‘ನಿತ್ಯವೂ 10 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹೊರದೇಶಗಳಿಂದ ಬರುತ್ತಾರೆ. ಸದ್ಯ ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಿಯೇ ಮುಂದೆ ಬಿಡಲಾಗುತ್ತಿದೆ. ಜ್ವರ, ಕೆಮ್ಮು ಸೇರಿ ಯಾವುದೇ ಲಕ್ಷಣ ಕಂಡುಬಂದರೂ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ’ ಎಂದು ತಪಾಸಣಾ ತಂಡದಲ್ಲಿರುವ ಅಧಿಕಾರಿಯೊಬ್ಬರು ಹೇಳಿದರು.

ನಿಲ್ದಾಣ ಖಾಲಿ ಖಾಲಿ: ಸಿಂಗಪುರ ಸೇರಿದಂತೆ ಹಲವು ದೇಶಗಳ ವಿಮಾನಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದರಿಂದಾಗಿ ನಿಲ್ದಾಣ ಖಾಲಿ ಖಾಲಿ ಆಗಿ ಕಾಣುತ್ತಿದೆ. ನಿಲ್ದಾಣದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಿದ್ದಾರೆ.

‘ನಿಲ್ದಾಣದಲ್ಲಿರುವ ಶಾಪಿಂಗ್ ಮಾಲ್ ಹಾಗೂ ಮಳಿಗೆಗಳಿಗೆ ಜನರೇ ಬರುತ್ತಿಲ್ಲ. ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

ಹೊರರಾಜ್ಯಗಳ ಪ್ರಯಾಣಿಕರ ತಪಾಸಣೆ ಇಲ್ಲ: ಹೊರ ರಾಜ್ಯಗಳಿಂದ ನಗರಕ್ಕೆ ಬರುತ್ತಿರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ. ಈಗಾಗಲೇ ಪಟ್ಟಿ ಮಾಡಿರುವ ಹೊರ ದೇಶಗಳ ಪ್ರಯಾಣಿಕರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ.

ಹೊರರಾಜ್ಯಗಳ ಪ್ರಯಾಣಿಕರ ತಪಾಸಣೆ ಇಲ್ಲ
ಹೊರ ರಾಜ್ಯಗಳಿಂದ ನಗರಕ್ಕೆ ಬರುತ್ತಿರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ. ಈಗಾಗಲೇ ಪಟ್ಟಿ ಮಾಡಿರುವ ಹೊರ ದೇಶಗಳ ಪ್ರಯಾಣಿಕರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.