ADVERTISEMENT

ಯಲಹಂಕದ ಬಳಿ ಕಬ್ಬನ್‌ ಪಾರ್ಕ್ ಮಾದರಿ ಉದ್ಯಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 11:35 IST
Last Updated 23 ಮಾರ್ಚ್ 2023, 11:35 IST
   

ಬೆಂಗಳೂರು: ಕಬ್ಬನ್‌ ಉದ್ಯಾನದ ಮಾದರಿಯಲ್ಲಿ ಯಲಹಂಕದ ಬಳಿ ಕಂಪೇಗೌಡ ಉದ್ಯಾನ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ, ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.

ಯಲಹಂಕದಿಂದ 7 ಕಿ.ಮೀ.ಅಂತರದಲ್ಲಿರುವ ಬೆಟ್ಟಲಸೂರು, ಸೊಂಡಪ್ಪನಹಳ್ಳಿ, ಕಾಡಿಗಾನಹಳ್ಳಿ ವ್ಯಾಪ್ತಿಯ 184.09 ಎಕರೆಯಲ್ಲಿ ಉದ್ಯಾನ ತಲೆ ಎತ್ತಲಿದೆ. ತೋಟಗಾರಿಕೆ ಇಲಾಖೆಯ ನೇತೃತ್ವದಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಂಘ ಅಭಿವೃದ್ಧಿ ಕಾರ್ಯಗಳ ನಿರ್ವಹಣೆ ಮಾಡಲಿದೆ. ಬೆಟ್ಟಲಸೂರು ಬಂಡೆಯಲ್ಲಿ ಕೆಂಪೇಗೌಡರ 100 ಅಡಿಯ ಏಕಶಿಲಾ ಮೂರ್ತಿ ಕೆತ್ತಿಸಲಾಗುವುದು. ಅಲ್ಲಲ್ಲಿ ಕೆರೆಗಳ ನಿರ್ಮಾಣ, ಹಕ್ಕಿಗಳ ಆವಾಸಸ್ಥಾನ ನಿರ್ಮಿಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

240 ವರ್ಷಗಳ ಇತಿಹಾಸ ಇರುವ ಕಬ್ಬನ್‌ ಉದ್ಯಾನದ ಮಾದರಿಯಲ್ಲಿ ಮತ್ತೊಂದು ಉದ್ಯಾನ ನಿರ್ಮಿಸಲು ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ. ಎಲ್ಲ ಕಾನೂನು ತೊಡಕುಗಳಿಂದ ಭೂಮಿ ಮುಕ್ತವಾಗಿದೆ. ವಿಮಾನ ನಿಲ್ದಾಣದ ಹೆದ್ದಾರಿಗೆ ಹೊಂದಿಕೊಂಡಿರುವ ₹ 800 ಕೋಟಿ ಮೌಲ್ಯದ ಆಸ್ತಿ ಸಂರಕ್ಷಿಸಲಾಗಿದೆ. ಕಂದಾಯ ಇಲಾಖೆಯಿಂದ ಭೂಮಿಯನ್ನು ಈಗಾಗಲೇ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಜಮೀನು ಬಂಡೆ, ಬೆಟ್ಟ, ಗುಡ್ಡಗಳನ್ನು ಹಾಗೆ ಉಳಿಸಿಕೊಂಡು ನಿಸರ್ಗದತ್ತವಾದ ಉದ್ಯಾನ ನಿರ್ಮಿಸಲು ಮಲೇಶಿಯಾ, ಸಿಂಗಾಪುರ ಕಂಪನಿಗಳು ರೂಪರೇಷೆ ಸಿದ್ಧಪಡಿಸಲು ಮುಂದೆ ಬಂದಿವೆ ಎಂದು ವಿವರ ನೀಡಿದರು.

ADVERTISEMENT

ಜಾರಕಬಂಡೆ ಕಾವಲು ಬಳಿ ಅರಣ್ಯ ಇಲಾಖೆ ಅಟಲ್ ಬಿಹಾರಿ ವಾಜಪೇಯಿ ಉದ್ಯಾನ ನಿರ್ಮಿಸಲು ಬಜೆಟ್‌ನಲ್ಲಿ ₹ 100 ಕೋಟಿ ಹಣ ಮೀಸಲಿಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದಯಾನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.