
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಇ–ಮೇಲ್ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ದೋಚುವ ಜಾಲವನ್ನು ಬೇಧಿಸಿರುವ ನಗರದ ಸೈಬರ್ ಕ್ರೈಂ ಪೊಲೀಸರು, ಸೈಬರ್ ವಂಚಕರ ಕೈ ಸೇರಿದ್ದ ₹2.16 ಕೋಟಿಯನ್ನು ‘ಗೋಲ್ಡನ್ ಅವರ್’ನಲ್ಲಿ (ಕೃತ್ಯ ನಡೆದ ಒಂದು ತಾಸಿನ ಒಳಗಾಗಿ) ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಜಾಲ ಬೇಧಿಸಿರುವ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ಗೆ ₹2.16 ಕೋಟಿ ಮರು ಪಾವತಿ ಮಾಡಿಸಿದ್ದಾರೆ. ಸೈಬರ್ ವಂಚಕರು ನೈಜೀರಿಯಾದಲ್ಲಿ ಕುಳಿತು ಬೆಂಗಳೂರಿನಲ್ಲಿರುವ ಗ್ರೂಪ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ, ಇ-ಮೇಲ್ ಸ್ಪೂಫಿಂಗ್ ಮಾಡಿ ರೆಡ್ಡೀಸ್ ಲ್ಯಾಬೋರೇಟರೀಸ್ಗೆ ಇ-ಮೇಲ್ ಸಂದೇಶ ಕಳುಹಿಸಿರುವುದು ಗೊತ್ತಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಗ್ರೂಪ್ ಫಾರ್ಮಾ ಕಂಪನಿ ಹೈದರಾಬಾದ್ನ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಜೊತೆ ಔಷಧಿ ವಿತರಣಾ ಒಪ್ಪಂದ ಮಾಡಿಕೊಂಡಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಗ್ರೂಪ್ ಫಾರ್ಮಾವು ರೆಡ್ಡೀಸ್ ಲ್ಯಾಬೋರೇಟರೀಸ್ಗೆ ₹2.16 ಕೋಟಿ ಮೌಲ್ಯದ ಔಷಧಿಯನ್ನು ಕಳುಹಿಸಿತ್ತು. ಬಳಿಕ ಬಿಲ್ ಕಳುಹಿಸಿ ಹಣ ಪಾವತಿ ಮಾಡುವಂತೆ ಇ-ಮೇಲ್ ಮೂಲಕ ಗ್ರೂಪ್ ಫಾರ್ಮಾ ಸಿಬ್ಬಂದಿ ರೆಡ್ಡೀಸ್ ಕಂಪನಿಗೆ ಸಂದೇಶ ಕಳುಹಿಸಿದ್ದರು.
ಈ ನಡುವೆ ಗ್ರೂಪ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿರುವ ಸೈಬರ್ ವಂಚಕರು,ಕಂಪನಿಯ ಕೆಕೇಶವ@ಗ್ರೂಪ್ಫಾರ್ಮಾ.ಇನ್ ಎಂಬ ಇ-ಮೇಲ್ ವಿಳಾಸವನ್ನು ನಕಲಿ ಮಾಡಿದ್ದಾರೆ. ಅಂದರೆ ಎಲ್ಲಾ ಬಿಗ್ ಲೆಟರ್ಗಳಿಂದ ಹೊಸ ಇ-ಮೇಲ್ ವಿಳಾಸ ಸೃಷ್ಟಿಸಿ, ಹಣವನ್ನು ನಿರ್ದಿಷ್ಟ ಖಾತೆಗೆ ಜಮೆ ಮಾಡುವಂತೆ ಡಾ ರೆಡ್ಡೀಸ್ ಗ್ರೂಪ್ಗೆ ಸಂದೇಶ ಕಳುಹಿಸಿದ್ದಾರೆ. ರೆಡ್ಡೀಸ್ ಲ್ಯಾಬೋರೇಟರೀಸ್ ಕಂಪನಿ ಸಿಬ್ಬಂದಿ, ನಕಲಿ ಇ-ಮೇಲ್ ವಿಳಾಸದಿಂದ ಬಂದಿದ್ದ ಮೇಲ್ನಲ್ಲಿ ಉಲ್ಲೇಖಿಸಿದ್ದ ಬ್ಯಾಂಕ್ ಖಾತೆಗೆ ₹2.16 ಕೋಟಿ ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಕೆಲ ಹೊತ್ತಿನ ಬಳಿಕ ಹಣ ಕಳುಹಿಸಿದ ಬಗ್ಗೆ ಗ್ರೂಪ್ ಫಾರ್ಮಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಹಣ ಜಮೆ ಆಗದಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಗ್ರೂಪ್ ಕಂಪನಿಯ ಅಧಿಕಾರಿಯೊಬ್ಬರು ಫೆಬ್ರುವರಿ 2ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಯಾವ ಖಾತೆಗೆ ಹಣ ಜಮೆಯಾಗಿದೆ ಎಂಬ ಮಾಹಿತಿ ಪಡೆದು, ನಂತರ ನಿರ್ದಿಷ್ಟ ಬ್ಯಾಂಕ್ಗೆ ನೋಟಿಸ್ ನೀಡಿ ನಕಲಿ ಬ್ಯಾಂಕ್ ಖಾತೆಯಲ್ಲಿರುವ ಹಣ ಜಪ್ತಿಗೆ ಕೋರಿದ್ದರು. ಅದರಂತೆ ಬ್ಯಾಂಕ್ ಅಧಿಕಾರಿಗಳು ಸಂಪೂರ್ಣ ಹಣ ಜಪ್ತಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಗುಜರಾತ್ನ ವಡೋದರದಲ್ಲಿರುವ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗೆ ಪೂರ್ಣ ಹಣ ಜಮೆ ಆಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಆಕೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಮಹಿಳೆಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಆಕೆ ಗುಣಮುಖರಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಕಮಿಷನರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.