
ಬೆಂಗಳೂರು: ‘ದಲಿತ ಕವಿ ಸಿದ್ಧಲಿಂಗಯ್ಯ ಸ್ಮಾರಕ ಹಾಗೂ ಪ್ರತಿಷ್ಠಾನ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಬೇಕು’ ಎಂದು ದಲಿತ ಸಮುದಾಯದ ಮುಖಂಡರು ಆಗ್ರಹಿಸಿದರು.
ಕರ್ನಾಟಕ ಅಹಿಂದ ಹೋರಾಟ ಸಮಿತಿ ಹಾಗೂ ಡಾ. ಸಿದ್ಧಲಿಂಗಯ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ನಡೆದ ಹೊಲೆ ಮಾದಿಗರ ಹಾಡುಗಳಿಗೆ 50 ವರ್ಷದ ಸಂಭ್ರಮ ಹಾಗೂ ಸಿದ್ಧಲಿಂಗಯ್ಯ ಅವರ 73ನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದರು.
ವಿಮರ್ಶಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಸಿದ್ಧಲಿಂಗಯ್ಯ ಅವರ ಕವನ ಸಂಕಲನಕ್ಕೆ ಹೊಲೆಯ ಮಾದಿಗರು ಎಂಬ ಹೆಸರಿಟ್ಟಿದ್ದಕ್ಕೆ ಇಡೀ ಕನ್ನಡ ಸಾಹಿತ್ಯವೇ ಆಘಾತಗೊಂಡಿತ್ತು. ಸಿದ್ಧಲಿಂಗಯ್ಯ ದಲಿತ ಕವಿಯಲ್ಲ. ಅವರು ಜನಸಾಮಾನ್ಯರ ಕವಿಯಾಗಿದ್ದರು. ಅವರ ಎಲ್ಲ ಕವಿತೆಗಳ ಮೂಲ ಧಾತು ಜನರೇ ಆಗಿರುತ್ತಿದ್ದರು. ಕಾವ್ಯವನ್ನು ಯಾರು ಬೇಕಾದರೂ ಬರೆಯಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಕವಿ ಸಿದ್ಧಲಿಂಗಯ್ಯ ಅವರು ಹೊಲೆಯ ಮಾದಿಗರ ಬಗ್ಗೆ ತಮ್ಮ ಕವಿತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಜನ್ಮದಿನವನ್ನು ಇನ್ನೂ ದೊಡ್ಡಮಟ್ಟದಲ್ಲಿ ಆಯೋಜಿಸಬೇಕು’ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ರಾಜ್ಯ ಸರ್ಕಾರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿದ್ಧಲಿಂಗಯ್ಯ ಅವರ ಸ್ಮಾರಕ ನಿರ್ಮಿಸಬೇಕು. ಸಿದ್ಧಲಿಂಗಯ್ಯ ಅವರು ದಲಿತ, ಕನ್ನಡ ಹಾಗೂ ದುಡಿಯುವ ಜನರ ಕವಿಯಾಗಿದ್ದಾರೆ’ ಎಂದು ಹೇಳಿದರು.
ಸಾಹಿತಿ ಕಾಳೇಗೌಡ ನಾಗವಾರ, ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಡಾ. ಸಿದ್ಧಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷೆ ರಮಾ ಕುಮಾರಿ, ಎಸ್.ಸಿ, ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.