ಬೆಂಗಳೂರು: ಕೆರೆ ಒತ್ತುವರಿ, ಕಾಡು ನಾಶ, ಅಸಮರ್ಪಕ ನಿರ್ವಹಣೆಯಿಂದ ನಗರದಾದ್ಯಂತ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ತಜ್ಞರು ಸೇರಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಸದಸ್ಯರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಎಸ್ಯುಸಿಐ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ವಿ. ಜ್ಞಾನಮೂರ್ತಿ ಮಾತನಾಡಿ, ‘ಮಾರ್ಚ್ ಆರಂಭದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ. ಕಳೆದ ವರ್ಷ ಮಳೆ ಕಡಿಮೆಯಾಗಿರುವುದು ಮೇಲ್ನೋಟಕ್ಕೆ ಕಾಣುವ ಕಾರಣವಾದರೆ, ರಾಜಕಾರಣಿಗಳ ಮತ್ತು ರಿಯಲ್ ಎಸ್ಟೇಟ್ ದಂಧೆಕೋರರ ದುರಾಸೆಯಿಂದಾಗಿ ಆಗುತ್ತಿರುವ ಅತಿಯಾದ ನಗರೀಕರಣವೇ ಸಮಸ್ಯೆಗೆ ಮೂಲ ಕಾರಣ. ಕೆರೆಗಳನ್ನು ಒತ್ತುವರಿಕೊಂಡು ಅಂತರ್ಜಲವನ್ನು ನಾಶ ಮಾಡಲಾಗಿದೆ’ ಎಂದು ಆರೋಪಿಸಿದರು.
ಟ್ಯಾಂಕರ್ಗಳನ್ನು ನೋಂದಣಿ ಮಾಡಿಕೊಂಡು ನಿಗದಿತ ಶುಲ್ಕವನ್ನಷ್ಟೇ ಪಡೆದು ನೀರು ಸರಬರಾಜು ಮಾಡಬೇಕು ಎಂದು ಜಲಮಂಡಳಿ ಆದೇಶಿಸಿದ್ದರೂ ಟ್ಯಾಂಕರ್ ದಂಧೆ ಜೋರಾಗಿ ನಡೆಯುತ್ತಿದೆ. ಕೃತಕ ಅಭಾವ ಸೃಷ್ಟಿಸಲಾಗಿದೆ. ಇಂಥ ಸಮಸ್ಯೆಗಳನ್ನು ಸರಿಪಡಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಮಿತಿ ಸದಸ್ಯೆ ಶೋಭಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಎಂ.ಎನ್. ಶ್ರೀರಾಮ್, ಸದಸ್ಯರಾದ ಎನ್.ರವಿ, ಎಚ್.ಪಿ. ಶಿವಪ್ರಕಾಶ್, ಕೃಷ್ಣ, ಜಯಣ್ಣ, ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.