ಬೆಂಗಳೂರು: 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿದೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಮಂಜುನಾಥ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಈಗಾಗಲೇ ಪ್ರತ್ಯೇಕ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದು, ಪ್ರತಿ ಬಜೆಟ್ನ ಒಟ್ಟು ಮೊತ್ತದ ಶೇಕಡ 5ರಷ್ಟು ಅನುದಾನವನ್ನು 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕೆ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.
‘ಡಾ.ಬಿ.ಆರ್. ಅಂಬೇಡ್ಕರ್ ಅಲೆಮಾರಿ ವಸತಿ ಯೋಜನೆ ನಿರ್ಮಿಸಿ, 31 ಜಿಲ್ಲೆಗಳಲ್ಲಿ ತಲಾ 500 ಮನೆಗಳಂತೆ ಒಟ್ಟು 15,500 ಮನೆಗಳನ್ನು ನಿರ್ಮಿಸಬೇಕು. ಈ ಯೋಜನೆಯನ್ನು ಮುಂದಿನ ಮೂರು ವರ್ಷದವರೆಗೆ ವಿಸ್ತರಿಸಿ, 46,500 ಮನೆಗಳನ್ನು ನಿರ್ಮಿಸಿ, ಅಲೆಮಾರಿ ಸಮುದಾಯದವರಿಗೆ ಉಚಿತವಾಗಿ ವಿತರಿಸಬೇಕು. ಭೂ ಒಡೆತನ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಗೆ 100 ಎಕರೆ ಕೃಷಿ ಜಮೀನನ್ನು ಅಲೆಮಾರಿ ಸಮುದಾಯಗಳಿಗೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
‘ಎರಡು ಜಿಲ್ಲೆಗಳಿಗೆ ಒಂದರಂತೆ 15 ವಸತಿ ಶಾಲೆಗಳನ್ನು ನಿರ್ಮಿಸಿ, ಸಾವಿತ್ರಿಬಾಯಿ ಫುಲೆ ಅಲೆಮಾರಿಗಳ ವಸತಿ ಶಾಲೆ ಎಂದು ನಾಮಕರಣ ಮಾಡಬೇಕು. ರಮಾಬಾಯಿ ಅಂಬೇಡ್ಕರ್ ಸ್ವಯಂ ಉದ್ಯೋಗ ಯೋಜನೆ ರೂಪಿಸಿ, ಪ್ರತಿಯೊಬ್ಬ ಫಲಾನುಭವಿಗೆ ₹10 ಲಕ್ಷ ಸಾಲ ಸೌಲಭ್ಯ ಒದಗಿಸಬೇಕು. ಅಲೆಮಾರಿ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿ ಅಕಾಡೆಮಿ ಸ್ಥಾಪಿಸಬೇಕು’ ಎಂದರು.
‘ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳ ಸಂಶೋಧನಾ ಕೇಂದ್ರ ಹಾಗೂ ಪ್ರತ್ಯೇಕ ಆಯೋಗ ರಚಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.